ಬೆಂಗಳೂರು: ‘ಹೂಡಿಕೆದಾರರಿಗೆ ನಮ್ಮ ರಾಜ್ಯವು ಪ್ರಶಸ್ತ ತಾಣವಾಗಿದ್ದು, ಸುಲಲಿತ ವ್ಯವಹಾರಕ್ಕಾಗಿ ಸರ್ಕಾರವು ವಿಶೇಷ ಪೋರ್ಟಲ್ಗಳನ್ನೂ ಸೃಷ್ಟಿಸಿದೆ’ ಎಂದುಗುಜರಾತ್ನ ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೀತುಭಾಯ್ ವಘಾನಿ ತಿಳಿಸಿದರು.
ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನದ (ವಿಜಿಜಿಎಸ್) ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಂಗಳವಾರ ಮಾತನಾಡಿದರು.
‘ವಿನೂತನ ತಂತ್ರಜ್ಞಾನ, ಆವಿಷ್ಕಾರ, ನವೋದ್ಯಮ, ವಿದ್ಯುತ್ ವಾಹನ, ಸಂಶೋಧನೆ, ಅಭಿವೃದ್ಧಿ, ಜ್ಞಾನ ವಿನಿಮಯ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು ನಮ್ಮ ಸರ್ಕಾರ ಆಸಕ್ತಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ದ ಕನಸು ನನಸಾಗಿಸಲು ನಮ್ಮ ರಾಜ್ಯವು ಬದ್ಧವಾಗಿದೆ. ಹೀಗಾಗಿ ‘ಆತ್ಮ ನಿರ್ಭರ ಗುಜರಾತ್ನಿಂದ ಆತ್ಮ ನಿರ್ಭರ ಭಾರತ’ ಎಂಬ ಘೋಷ ವಾಕ್ಯದೊಂದಿಗೆ2022ರ ಜನವರಿಯಲ್ಲಿ ಜಾಗತಿಕ ಸಮ್ಮೇಳನ ನಡೆಸಲು ನಿರ್ಧರಿಸಿದ್ದೇವೆ’ ಎಂದರು.
‘2003ರಲ್ಲಿ ಆರಂಭವಾದ ವಿಜಿಜಿಎಸ್, ಅಂದಿನಿಂದಲೂ ವ್ಯವಹಾರದ ಜಾಲ ವಿಸ್ತರಿಸಿಕೊಳ್ಳುತ್ತಲೇ ಬಂದಿದೆ. ಯೋಜನಾತ್ಮಕ ಪಾಲುದಾರಿಕೆಗೆ ಇದು ಜಾಗತಿಕ ವೇದಿಕೆಯಾಗಿದೆ. ನಮ್ಮ ಸರ್ಕಾರವು ಕೈಗಾರಿಕಾ ನೀತಿ, ಸಮಗ್ರ ಸಾರಿಗೆ, ವಿದ್ಯುತ್ ವಾಹನ ನೀತಿ, ಸೌರಶಕ್ತಿ, ಪ್ರವಾಸೋದ್ಯಮ ಮತ್ತು ಜವಳಿ ನೀತಿಗಳನ್ನೂ ಜಾರಿಗೊಳಿಸಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.