ಮೈಸೂರು: ‘ಟಿಪ್ಪು ಸುಲ್ತಾನ್ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿರಬಹುದು. ಆದರೆ ಭಾರತೀಯತೆ, ರಾಷ್ಟ್ರೀಯತೆಯನ್ನು ಎತ್ತಿ ಹಿಡಿದಿದ್ದ. ಜಗತ್ತಿನಲ್ಲಿ ಭಾರತಕ್ಕೆ ವಿಶಿಷ್ಟ ಮೌಲ್ಯ ತಂದುಕೊಟ್ಟಿರುವ ಆತನ ಕುರಿತ ಸತ್ಯಗಳನ್ನು ಸುಳ್ಳಾಗಿಸಲು ಸಾಧ್ಯವಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಪಾದಿಸಿದರು.
ಇತಿಹಾಸತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಅವರ, ‘ಟೀಪೂ ಮಾನ್ಯತೆ ಸಿಗದ ಸುಲ್ತಾನ್: ಅಂದು- ಇಂದು’ ಕೃತಿಯನ್ನು ಶನಿವಾರ ಇಲ್ಲಿ ಬಿಡುಗಡೆಗೊಳಿಸಿ ಮಾತನಾಡಿ, ‘ಟಿಪ್ಪು, ಜಗತ್ತಿನ ಮಾನ್ಯತೆ ಪಡೆದಿರುವ ಚಕ್ರವರ್ತಿ. ಸೂರ್ಯನ ಪ್ರಕಾಶಕ್ಕೆ ಪರದೆ ಹಿಡಿಯಲು ಸಾಧ್ಯವಿಲ್ಲ. ಟಿಪ್ಪು ಹೊಂದಿರುವ ಮಾನ್ಯತೆ ಮರೆಮಾಚಲು ಆಗದು’ ಎಂದರು.
‘ಕೊಡಗಿನಲ್ಲಿ 80 ಸಾವಿರ ಮಂದಿಯನ್ನು ಕೊಂದಿದ್ದ ಎಂದು ಆತನ ಟೀಕಾಕಾರರು ಆರೋಪಿಸುತ್ತಾರೆ. ಕೊಡಗಿನ ಈಗಿನ ಜನಸಂಖ್ಯೆ ಸುಮಾರು 4 ಲಕ್ಷ. ಎರಡೂವರೆ ಶತಮಾನದ ಹಿಂದೆಯೇ 80 ಸಾವಿರ ಮಂದಿಯನ್ನು ಕೊಲ್ಲಬೇಕಿದ್ದರೆ ಅಲ್ಲಿನ ಜನಸಂಖ್ಯೆ ಎಷ್ಟಿತ್ತು’ ಎಂದು ಪ್ರಶ್ನಿಸಿದರು.
‘ನೆಪೋಲಿಯನ್ ಒಳಗೊಂಡಂತೆ ಜಗತ್ತು ಕಂಡ ಮಹಾನ್ ಚಕ್ರವರ್ತಿಗಳು ಕೂಡಾ ಎದುರಾಳಿಗಳ ಮುಂದೆ ತಲೆಬಾಗಿದ್ದಾರೆ. ತನ್ನ ವೈರಿಗಳ ಮುಂದೆ ಮಂಡಿಯೂರಿ ಶರಣಾಗದ ಜಗತ್ತಿನ ಏಕೈಕ ವೀರನೆಂದರೆ ಟಿಪ್ಪು’ ಎಂದು ಬಣ್ಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.