ADVERTISEMENT

ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್‌ ವಾಗ್ದಾಳಿ

ಕುರುಬರ ಸಮಾವೇಶಕ್ಕೆ ಗೈರಾದುದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:07 IST
Last Updated 7 ಫೆಬ್ರುವರಿ 2021, 16:07 IST
ಎಚ್‌. ವಿಶ್ವನಾಥ್‌
ಎಚ್‌. ವಿಶ್ವನಾಥ್‌   

ಬೆಂಗಳೂರು: ‘ಕುರುಬ ಸಮುದಾಯ ತನು, ಮನ ಮತ್ತು ಧನ ಧಾರೆ ಎರೆದು ಯಾರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡಿತ್ತೋ ಅವರೇ ಸಮುದಾಯದ ಜನರ ಪರವಾದ ಹೋರಾಟಕ್ಕೆ ಬಂದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್‌ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುವಾಗ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ವಿಷಯ ಪ್ರಸ್ತಾಪಿಸಿದ ವಿಶ್ವನಾಥ್‌, ‘ಇದು ಸಮಸ್ತ ಕುರುಬ ಸಮುದಾಯದ ಪರವಾಗಿ ನಡೆಯುತ್ತಿರುವ ಹೋರಾಟ. ಇಲ್ಲಿ ರಾಜಕೀಯ ಕಾರ್ಯಸೂಚಿ ಇಲ್ಲ. ಕುರುಬರ ಬೆಂಬಲದಿಂದ ಮುಖ್ಯಮಂತ್ರಿ ಆದವರು ಈ ಬಗ್ಗೆ ಕಣ್ಣು ತೆರೆದು ನೋಡಬೇಕು’ ಎಂದರು.

ಸಮುದಾಯದ ಜನರಿಗೆ ನ್ಯಾಯ ಕೇಳುವುದಕ್ಕಾಗಿ ಸ್ವಾಮೀಜಿಗಳು 340 ಕಿಲೋಮೀಟರ್‌ ದೂರ ಪಾದಯಾತ್ರೆ ಮಾಡಿಕೊಂಡು ಬಂದಿದ್ದಾರೆ. ಸಮುದಾಯದ ಬಲ ಪಡೆದು ಮುಖ್ಯಮಂತ್ರಿ ಆದ ವ್ಯಕ್ತಿ ಸ್ವಾಮೀಜಿಗಳನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಬೇಕಿತ್ತು. ಪಾದಯಾತ್ರೆಯ ಅನುಭವವನ್ನು ಕೇಳಬೇಕಿತ್ತು. ಆದರೆ, ಆ ವ್ಯಕ್ತಿ ಅಂತಹ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ADVERTISEMENT

‘ಸಿದ್ದರಾಮಯ್ಯ’ ಸೃಷ್ಟಿಸಿದ ರೋಮಾಂಚನ

ಸಮಾವೇಶದಲ್ಲಿ ಒಮ್ಮೆ ಮಾತ್ರ ಸಿದ್ದರಾಮಯ್ಯ ಅವರ ಹೆಸರು ನೇರವಾಗಿ ಪ್ರಸ್ತಾಪವಾಯಿತು. ಎಚ್‌.ಎಂ. ರೇವಣ್ಣ ಹೊರತಾಗಿ ಯಾರೂ ಸಿದ್ದರಾಮಯ್ಯ ಹೆಸರನ್ನು ಉಲ್ಲೇಖಿಸಲಿಲ್ಲ. ‘ಕುರುಬ ಸಮುದಾಯದ ಹೋರಾಟ ಫಲವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು’ ಎಂದು ರೇವಣ್ಣ ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದಂತೆ ಸಮಾವೇಶದಲ್ಲಿದ್ದ ಜನರು ಮೈಮರೆತು ಸಂಭ್ರಮಿಸಿದರು. ಕೆಲವು ನಿಮಷಗಳ ಕಾಲ ಚಪ್ಪಾಳೆ, ಶಿಳ್ಳೆ, ಕೇಕೆ ಹಾಕಿ ಕುಣಿದಾಡಿದರು.

ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಜನರು ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನು ಕಂಡ ವೇದಿಕೆಯಲ್ಲಿದ್ದ ಗಣ್ಯರು ಕಕ್ಕಾಬಿಕ್ಕಿಯಾದರು. ಅದು ಸಚಿವ ಈಶ್ವರಪ್ಪ ಸೇರಿದಂತೆ ಕೆಲವರ ಮಾತಿನಲ್ಲಿ ಪರೋಕ್ಷವಾಗಿ ವ್ಯಕ್ತವೂ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.