ADVERTISEMENT

ಹಂಪಿ ಉತ್ಸವ ಒಂದು ದಿನಕ್ಕೆ ಸೀಮಿತ?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:40 IST
Last Updated 3 ಡಿಸೆಂಬರ್ 2018, 19:40 IST

ಬೆಂಗಳೂರು: ಬರಗಾಲ ಕಾರಣಕ್ಕೆ ಪ್ರಸಕ್ತ ಸಾಲಿನ ಹಂಪಿ ಉತ್ಸವ ರದ್ದು ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಒಂದು ದಿನದ ಮಟ್ಟಿಗೆ ಉತ್ಸವ ಆಚರಿಸಲು ಚಿಂತನೆ ನಡೆಸಿದೆ.

‘ವಿಜಯನಗರ ಮನೆತನದ ಗೌರವಕ್ಕೆ ಧಕ್ಕೆ ಆಗದಂತೆ, ಹಂಪಿ ಉತ್ಸವ ಹೇಗೆ ಆಚರಣೆ ಮಾಡಬಹುದೆಂಬ ಬಗ್ಗೆ ಅಧಿಕಾರಿಗಳಿಂದ ವಿವರ ಕೇಳಿದ್ದೇನೆ. ಒಂದು ದಿನವಾದರೂ ಉತ್ಸವ ಆಚರಣೆ ಮಾಡಬಹುದಾ ಎಂದೂ ಸಮಾಲೋಚನೆ ನಡೆಸುತ್ತಿದ್ದೇವೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

‘ಬರ ಕಾರಣಕ್ಕೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಂಪಿ ಉತ್ಸವ ಬೇಡ ಎಂದು ಸಲಹೆ ಕೊಟ್ಟಿದ್ದರು’ ಎಂದರು.

ADVERTISEMENT

‘ಬಿಜೆಪಿಯವರು ಉತ್ಸವಕ್ಕೆ ಭಿಕ್ಷೆ ಎತ್ತುವ ಮೂಲಕ ಜನರಿಂದ ವಸೂಲಿ‌ ಮಾಡುವುದು ಬೇಡ. ಸಾಧ್ಯವಾದರೆ ತಮ್ಮ ನಿಧಿಯಿಂದ ಹಣ ನೀಡಲಿ’ ಎಂದು ಅವರು ಸಲಹೆ ನೀಡಿದರು.

ಪ್ರತಿಮೆ ನಿರ್ಮಿಸುವ ಪ್ರಸ್ತಾಪ ಇಲ್ಲ: ‘ಕೆಆರ್‌ಎಸ್‌ನಲ್ಲಿ ಕಾವೇರಿ ಪ್ರತಿಮೆ ನಿರ್ಮಿಸುವ ಪ್ರಸ್ತಾಪ ಇಲ್ಲ. ಒಂದು ವೀಕ್ಷಣಾ ಟವರ್ ನಿರ್ಮಿಸಿ, ಅದಕ್ಕೆ ಕಾವೇರಿಯ ರೂಪ ನೀಡಲಾಗುವುದು’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

‘ಕೆಆರ್‌ಎಸ್ ಬಳಿ ಒಂದು ಟವರ್ ನಿರ್ಮಾಣವಾಗಲಿದೆ. ಅದರ ಮೂಲಕ ಅಣೆಕಟ್ಟು ನೋಡಬಹುದಾಗಿದೆ. ಆ ಟವರ್‌ಗೆ ಹೆಣ್ಣು ಮಗಳ ರೂಪ ಕೊಟ್ಟಿದ್ದಾರೆ. ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ ನಿರ್ಮಾಣಕ್ಕೆ ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ಮೈಸೂರು ಮಹಾರಾಜರೂ ಇರಲಿದ್ದಾರೆ’ ಎಂದು ವಿವರಿಸಿದರು.

‘ಬಜೆಟ್‌ನಲ್ಲಿ ಘೋಷಿಸಿರುವ ಈ ಯೋಜನೆಯ ಡಿಪಿಆರ್ ರಚನೆಗೆ ₹5 ಕೋಟಿ ಮೀಸಲಿಟ್ಟಿದ್ದೇವೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಸಾಕಾರಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.