ADVERTISEMENT

ಪ್ರಚೋದನಕಾರಿ ಭಾಷಣ ಆರೋಪ: ತೆಲಂಗಾಣ ಶಾಸಕರ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 16:00 IST
Last Updated 20 ಅಕ್ಟೋಬರ್ 2023, 16:00 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ಯಾದಗಿರಿ ಹೊರವಲಯದ ವನಕೇರಿ ಬಡಾವಣೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ವೇದಿಕೆಯಲ್ಲಿ ಕತ್ತಿ ಝಳಪಿಸಿದ ಆರೋಪದಡಿ ತೆಲಂಗಾಣ ಶಾಸಕ ರಾಜಾಸಿಂಗ್‌ ಠಾಕೂರ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಸಂಬಂಧ ರಾಜಾಸಿಂಗ್‌ ಠಾಕೂರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ. ಅರೋಪ ಹೊರಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ವಿಚಾರಣೆಗೆ ಪೂರ್ವಾನುಮತಿಯನ್ನೂ ಪಡೆದಿಲ್ಲ. ಹಾಗಾಗಿ, ಈ ಪ್ರಕರಣಕ್ಕೆ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 153 ಎ ಅನ್ವಯ‌ ಆಗುವುದಿಲ್ಲ’ ಎಂದು ಪ್ರಕರಣ ರದ್ದುಗೊಳಿಸಿದೆ.

ADVERTISEMENT

ಪ್ರಕರಣವೇನು?: ಯಾದಗಿರಿ ಹೊರವಲಯದ ವನಕೇರಿ ಬಡಾವಣೆಯಲ್ಲಿ 2017ರ ಡಿಸೆಂಬರ್ 12ರಂದು ನಡೆದಿದ್ದ ಹಿಂದೂ ವಿರಾಟ್ ಸಮಾವೇಶದಲ್ಲಿ ರಾಜಾಸಿಂಗ್ ಠಾಕೂರ್ ಭಾಗವಹಿಸಿದ್ದರು. ಅವರಿಗೆ, "ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವಂತಿಲ್ಲ ಹಾಗೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡುವಂತಿಲ್ಲ ಎಂದು ಮೊದಲೇ ನಿರ್ದೇಶನ ನೀಡಲಾಗಿತ್ತು. ಆದರೂ, ಅವರು ವೇದಿಕೆಯಲ್ಲಿ ಕತ್ತಿಯನ್ನು ಝಳಪಿಸಿ ಜನರನ್ನು ಪ್ರಚೋದಿಸುವಂತಹ ಭಾಷಣ ಮಾಡಿದ್ದಾರೆ" ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ಐಪಿಸಿ ಕಲಂ 153ಎ ಮತ್ತು ಶಸ್ತ್ರಾಸ್ತ್ರ ಕಾಯ್ದೆ-1959ರ ಕಲಂ 25ರ (1ಎಎ) ಅಡಿ 2019ರಲ್ಲಿ‌ ಯಾದಗಿರಿ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.