ಹೊಸಪೇಟೆ: ‘ಮಗನ ಸಾವು ಸಿದ್ದರಾಮಯ್ಯನವರಿಗೆ ದೇವರು ಕೊಟ್ಟ ಶಿಕ್ಷೆ ಎಂದಿರುವ ಮಾಜಿಸಚಿವ ಜನಾರ್ದನ ರೆಡ್ಡಿ ಅವರಿಗೆ ಮನುಷ್ಯತ್ವ ಇಲ್ಲ. ಮನುಷ್ಯತ್ವ ಇರುವವರು ಈ ರೀತಿಯ ಹೇಳಿಕೆ ಕೊಡುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಂ. ಸಿ. ವೇಣುಗೋಪಾಲ್ ಕುಟುಕಿದರು.
ಮಂಗಳವಾರ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರ ಪರ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕೀಯದಲ್ಲಿ ಪರಸ್ಪರ ಟೀಕೆ, ಟಿಪ್ಪಣಿ ಮಾಡುವುದು ಸಹಜ. ಆದರೆ, ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಅದರಲ್ಲೂ ಸಾವಿನ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವುದು ಶೋಭೆ ತರುವಂತಹದ್ದಲ್ಲ. ಗೌರವದ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಬಗ್ಗೆ ಜನಾರ್ದನ ರೆಡ್ಡಿ ಅವರು ಇಷ್ಟು ಲಘುವಾಗಿ ಮಾತನಾಡಬಾರದಿತ್ತು’ ಎಂದರು.
‘ಬಳ್ಳಾರಿಗೆ ಬಂದರೆ ಕಾನೂನು ಭಂಗ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಜನಾರ್ದನ ರೆಡ್ಡಿ ಅವರ ಮೇಲೆ ನಿರ್ಬಂಧ ಹೇರಿದೆ. ಹೀಗಿರುವಾಗ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.