ಬಳ್ಳಾರಿ: ‘ಕಾಂಗ್ರೆಸ್ ಇಲ್ಲದೆ ಯಾವ ಒಕ್ಕೂಟವೂ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅಸಾಧ್ಯ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಂಗಳವಾರ ಇಲ್ಲಿ ಪ್ರತಿಪಾದಿಸಿದರು.
‘ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅನುಭವ ಗಳಿಸಿಕೊಳ್ಳುತ್ತಿದ್ದಾರೆ. ಅವರ ಅರ್ಹತೆಯ ಬಗ್ಗೆ ನಾನು ಮಾತನಾಡಲಾರೆ. ಪ್ರಧಾನಿಯಾಗಲು ಯಾರು ಅರ್ಹರು ಎಂಬ ಚರ್ಚೆ ರಾಹುಲ್ ಇಲ್ಲದೆ ಅಪೂರ್ಣ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದೇಶದಲ್ಲಿ ಮಹಾಮೈತ್ರಿಯು ಚುನಾವಣೆಗಳಿಗೆ ಮುನ್ನ ಮತ್ತು ನಂತರ ಎರಡು ಹಂತಗಳಲ್ಲಿ ಏರ್ಪಡಲಿದೆ. ಬಿಎಸ್ಪಿಯ ಮಾಯಾವತಿ ಈಗ ಜೆಡಿಎಸ್ ಜೊತೆಗೆ ಮಾತ್ರ ಇರಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೊತೆಗೂ ಬರುವಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯದ ಐದು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯು ದೇಶದ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಜಾತ್ಯತೀತ ಪಕ್ಷಗಳು ಎದುರಿಸಲಿರುವ ಪರೀಕ್ಷೆ. ದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜೊತೆಗೆ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ. ಇಲ್ಲಿಯೂ ಮೈತ್ರಿಯ ಭಾಗವಾಗಿರುವ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.