ಬೆಂಗಳೂರು: ಲಾಕ್ಡೌನ್ ಕಾರಣದಿಂದ ತೋಟಗಾರಿಕಾ ಬೆಳೆಗಳ ಬೆಲೆ ಕುಸಿದು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ನೆರವು ಘೋಷಿಸಲು ಒತ್ತಾಯಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಪ್ರಧಾನಿಗೆ ಪತ್ರ ಬರೆದಿದ್ದಾರೆ.
‘ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ಇಲ್ಲದ ಸ್ಥಿತಿ ಇದೆ. ದರ ಸಿಗದೇ ಕೋಲಾರದಲ್ಲಿ ಟೊಮೆಟೊ ರಸ್ತೆಗೆ ಚೆಲ್ಲಿರುವ ಘಟನೆಗಳಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿಯೂ ತೋಟಗಾರಿಕಾ ಬೆಳೆಗಾರರು ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸೋಮವಾರ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಹುತೇಕ ಎಲ್ಲ ನಗರಗಳಲ್ಲಿ ಮಾರುಕಟ್ಟೆಗಳು ಬಂದ್ ಆಗಿವೆ. ಇನ್ನೊಂದೆಡೆ ತೋಟಗಾರಿಕೆ ಬೆಳೆಗಳು ಕನಿಷ್ಠ ಬೆಂಬಲ ಬೆಲೆಯ ವ್ಯಾಪ್ತಿಯಲ್ಲೂ ಇಲ್ಲ. ಕೋವಿಡ್ ಲಸಿಕೆ ಖರೀದಿ ಮತ್ತು ಚಿಕಿತ್ಸಾ ವ್ಯವಸ್ಥೆಗೆ ಹೆಚ್ಚಿನ ಹಣ ವ್ಯಯಿಸುತ್ತಿರುವ ಕಾರಣ ರಾಜ್ಯ ಸರ್ಕಾರಗಳು ರೈತರಿಗೆ ನೆರವು ನೀಡುವ ಸ್ಥಿತಿಯಲ್ಲಿ ಇಲ್ಲ. ಕೇಂದ್ರವೇ ನೆರವಿಗೆ ಧಾವಿಸಬೇಕು’ ಎಂದು ಕೋರಿದ್ದಾರೆ.
‘ಸಮಸ್ಯೆ ಪರಿಹಾರ ಕುರಿತು ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸೂಚಿಸಬೇಕು. ಕೇಂದ್ರ ಸರ್ಕಾರವು ಸಕ್ರಿಯವಾಗಿ ಕೆಲಸ ಮಾಡಬೇಕು. ಕೇಂದ್ರ ನೆರವು ನೀಡಿದರೆ ಗ್ರಾಮೀಣ ಜನರಿಗೆ ಅನುಕೂಲ ಆಗುತ್ತದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.