ಬೆಂಗಳೂರು: ಕುಮಾರಸ್ವಾಮಿ ಕಾಂಗ್ರೆಸ್ ಜತೆಗೆ ಸರ್ಕಾರ ನಡೆಸುತ್ತಿದ್ದಾಗ ಸುರಿಸಿದಷ್ಟು ಕಣ್ಣೀರನ್ನು ಬಿಜೆಪಿ ಜತೆಗಿನ ಸರ್ಕಾರ ನಡೆಸುತ್ತಿದ್ದಾಗ ಸುರಿಸಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
‘ಸರ್ಕಾರ ರಚನೆಯಾಗಿನಿಂದಲೂ ಕಾಂಗ್ರೆಸ್ನವರಿಂದ ಕಿರುಕುಳ ನಡೆಯುತ್ತಲೇ ಇತ್ತು. ಎರಡು ತಿಂಗಳಿಗೇ ನಾನು ರಾಜೀನಾಮೆ ನೀಡುತ್ತೇನೆ ಅಪ್ಪಾ ಎಂದು ಕುಮಾರಸ್ವಾಮಿ ನನ್ನ ಮುಂದೆ ಕಣ್ಣೀರು ಹಾಕಿದ. ನಾನು ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದೆ. ಲೋಕಸಭಾ ಚುನಾವಣೆಯವರೆಗಾದರೂ ಈ ಮೈತ್ರಿ ಮುಂದುವರಿಯಬೇಕು, ಇಲ್ಲವಾದರೆ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡ ಸರ್ಕಾರದ ಗತಿ ಏನಾಯಿತು ಎಂದು ದೇಶ ಆಡಿಕೊಳ್ಳುವಂತಾಗುತ್ತದೆ ಎಂದು ಹೇಳಿದರು. ಅವರ ಮಾತಿಗೆ ಬೆಲೆ ಕೊಟ್ಟು ನೋವನ್ನು ಸಹಿಸಿಕೊಂಡಿರಲು ನಾನು ತಿಳಿಸಿದೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆತಿಳಿಸಿದರು.
‘ಸರ್ಕಾರ ಗಟ್ಟಿಯಾಗಿಯೇ ಇದೆ ಎಂದು ಸಿದ್ದರಾಮಯ್ಯ ನಂಬಿಸುತ್ತಲೇ ಇದ್ದರು. ಅವರ ಮಾತನ್ನು ನಾವೆಲ್ಲ ನಂಬಿದೆವು. ಕುಮಾರಸ್ವಾಮಿ ಅಮೆರಿಕಕ್ಕೆ ಹೋದಾಗ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಹೋದರಲ್ಲ, ಆಗ ಸಹ ಏನೂ ಆಗುವುದಿಲ್ಲ ಎಂದೇ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಹೇಳಿದ್ದರು. ಆದರೆ ಆದದ್ದೇ ಬೇರೆ’ ಎಂದು ಅವರು ಹೇಳಿದರು.
‘ಕಾಂಗ್ರೆಸ್ ಜತೆಗೆ ಮೈತ್ರಿ ಬೇಡ, ನಮ್ಮೊಂದಿಗೆ ಬನ್ನಿ ಎಂದು ಈ ಹಿಂದೆ ಸ್ವತಃ ಮೋದಿ ಅವರಿಂದಲೇ ಸೂಚನೆ ಬಂದಿತ್ತು. ಕುಮಾರಸ್ವಾಮಿಗೆ ಹೀಗೆ ಮೂರ್ನಾಲ್ಕು ಬಾರಿ ಒತ್ತಡ ಬಂದಿತ್ತು. ನನ್ನಪ್ಪನಿಗೆ ಒಂದು ಬಾರಿ ಶಿಕ್ಷೆ ಕೊಟ್ಟಿದ್ದೇನೆ. ಇನ್ನೊಮ್ಮೆ ಅವರಿಗೆ ಶಿಕ್ಷೆ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ದೃಢವಾಗಿ ಹೇಳಿದ. ನನ್ನ ಮನಸ್ಸಿಗೆ ನೋವು ಆಗಬಾರದು ಎಂಬ ಕಾರಣಕ್ಕೇ ಕಾಂಗ್ರೆಸ್ ಜತೆಗೆ 14 ತಿಂಗಳು ಮೈತ್ರಿ ಸರ್ಕಾರ ಮುಂದುವರಿಸಿದ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.