ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅನರ್ಹ ಶಾಸಕರ ಪರಿಸ್ಥಿತಿಯನ್ನು ಟ್ವೀಟ್ ಮಾಡಿ ಗೇಲಿ ಮಾಡಿದ್ದಾರೆ.
ಬಸವಣ್ಣನವರ ವಚನವೊಂದನ್ನು ಉದಾಹರಣೆಯನ್ನಾಗಿ ನೀಡಿರುವ ಅವರು, ಅನರ್ಹರು ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬಂತಾಗಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರೆ.
‘ಕಾಲಲಿ ಕಟ್ಟಿದ ಗುಂಡು... ಕೊರಳಲಿ ಕಟ್ಟಿದ ಬೆಂಡು...ತೇಲಲೀಯದು ಗುಂಡು... ಮುಳುಗಲೀಯದು ಬೆಂಡು... ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು,’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡೆದಿದ್ದ 17 ಶಾಸಕರು ಅನರ್ಹತೆಗೆ ಗುರಿಯಾಗಿದ್ದು, ಅವರ ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿತ್ತು. ಆದರೆ, ಚುನಾವಣೆಗೆ ಸುಪ್ರೀಂ ಕೋರ್ಟ್ ಗುರುವಾರವಷ್ಟೇ ತಡೆ ನೀಡಿದೆ. ಹೀಗಾಗಿ ಅನರ್ಹತೆಯ ಹಣೆ ಪಟ್ಟಿ ಮುಂದುವರಿದೆ. ಇದೇ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.