ಬೆಂಗಳೂರು: ಇಂದು ಬಿಜೆಪಿ ಸರ್ಕಾರವನ್ನು ನಡೆಸುತ್ತಿಲ್ಲ. ಅದು ವಿಎಚ್ಪಿ, ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ದುರಾಡಳಿತದ ಬಗ್ಗೆ ಮನೆ ಮನೆಗೆ ತೆರಳಿಕರಪತ್ರ ಹಂಚಿಲಾಗುವುದುಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಸಮಾವೇಶದಲ್ಲಿ ನಾತನಾಡಿದ ಅವರು, ‘ನೆಹರು ಅವರು ಅಂದಿನ ನಿರ್ಣಯಗಳನ್ನು ಒಬ್ಬರೇ ತೆಗೆದುಕೊಂಡಿದ್ದಲ್ಲ. ಮಹಾತ್ಮ ಗಾಂಧಿ ಸಹಿತ ಹಲವರ ಜತೆ ಚರ್ಚಿಸಿ ನಿರ್ಣಯ ಕೈಗೊಂಡಿದ್ದರು. ಆದರೆ, ಅಮಿತ್ ಶಾ ಅವರು ನೆಹರೂ ಮಾಡಿದ ತಪ್ಪನ್ನು ಸರಿಪಡಿಸಲು ಹೋಗುತ್ತಿದ್ದಾರೆ. ನೆಹರೂ ಜೀವಂತ ಇದ್ದಾಗ ಶಾ ಹುಟ್ಟಿಯೇ ಇರಲಿಲ್ಲ, ಇವರು ಯಾವ ರೀತಿ ತಪ್ಪು ಸರಿಪಡಿಸುತ್ತಾರೆ?‘ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನಮ್ಮ ಮನೆ ಬಾಗಿಲಿಗೆ ಬಂದವರು ಯಡಿಯೂರಪ್ಪ
‘2006ರಲ್ಲಿ ಅಧಿಕಾರದ ಆಸೆಯಿಂದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ, ಇರುವುದು ಜೆಡಿಎಸ್ ಬಗ್ಗೆ ಮನನ ಮಾತ್ರ. 2006ರಲ್ಲಿ ಅಧಿಕಾರಕ್ಕಾಗಿ ನಾನು ಬಿಜೆಪಿ ಜತೆ ಹೋಗಿಲ್ಲ. ಪಕ್ಷದ ಉಳಿವಿಗಾಗಿ ಅಂದು ಬಿಜೆಪಿ ಮೈತ್ರಿ ಕಡಿದುಕೊಳ್ಳುವ ನಿರ್ಧಾರ ಕೈಗೊಂಡಿದ್ದೆ’ ಎಂದು ಕುಮಾರಸ್ವಾಮಿ ತಿಳಿಸಿದರು.
2009ರಲ್ಲಿ ನಮಗೆ 9 ಸಚಿವ ಸ್ಥಾನ ಬಿಟ್ಟುಕೊಡಲು ಸೋನಿಯಾ ಮುಂದಾಗಿದ್ದರು. ಆದರೆ, ಅಧಿಕಾರಕ್ಕಾಗಿ ಪಕ್ಷದ ಹಿತ ಬಲಿ ಕೊಡಲಿಲ್ಲ. 2014ರಲ್ಲಿ ರಾಜನಾಥ್ ಸಿಂಗ್ ಅವರು 10 ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಎರಡು ತಿಂಗಳು ಹೇಳುತ್ತಲೇ ಇದ್ದರು. ಆಗಲೂ ಪಕ್ಷದ ಹಿತ ಬಲಿ ಕೊಡಲಿಲ್ಲ ಎಂದು ಕುಮಾರಸ್ವಾಮಿ ನೆನಪಿಸಿದರು.
ಪಕ್ಷದ ಕಾರ್ಯಕರ್ತರು ಎದೆಗುಂದಬೇಡಿ
ಸೋಲು ಯಾವತ್ತೂ ಶಾಶ್ವತ ಅಲ್ಲ, ಸೋಲಿನಿಂದ ಕಾರ್ಯಕರ್ತರು ಎದೆಗುಂದಬಾರದು. 1989ರಲ್ಲಿ ದೇವೇಗೌಡರು ಹೊಳೆನರಸೀಪುರ ಮತ್ತು ಕನಕಪುರಗಳಲ್ಲಿ ಸೋತಿದ್ದರು.ಆದರೆ, ನಾಲ್ಕೇ ವರ್ಷದಲ್ಲಿ ಪಕ್ಷ ಮೈಕೊಡವಿ ಎದ್ದು ನಿಂತಿತು. ದೇವೇಗೌಡರು ದೇಶದ ಪ್ರಧಾನಿಯಾದರು ಎಂದರು.
ಲಿಂಗಾಯತರಿಗೂ ಬಿಜೆಪಿ ಕೈಕೊಡಲಿದೆ
'ನನಗೆ ಜಾತಿ ಗೊತ್ತಿಲ್ಲ, ಮುಸ್ಲಿಮರ ಮತ ಗಳಿಸಲಿಕ್ಕಾಗಿ ನಾನು ಮಂಗಳೂರಿಗೆ ಹೋಗಿಲ್ಲ, ಮುಸ್ಲಿಮರನ್ನು ಕೊಂದಿರಿ ಎಂದು ನಾನು ಹೇಳಿಲ್ಲ, ಅಮಾಯಕರನ್ನು ಕೊಂದಿದ್ದೀರಿ ಎಂದು ಹೇಳಿದ್ದೆ ಎಂದರು.
'ಸಮಾಜ ಒಡೆಯಬೇಕು, ರಕ್ತ ಹರಿಯಬೇಕು ಎಂಬುದು ಬಿಜೆಪಿ ಉದ್ದೇಶ. ಮಂಗಳೂರಿಗೂ, ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಕೇಳುತ್ತೀರಿ, ಹಾಗಿದ್ದರೆ ಕನಕಪುರಕ್ಕೂ ಪ್ರಭಾಕರ ಭಟ್ಟರಿಗೂ ಏನು ಸಂಬಂಧ ಎಂದು ಮುಂದೆ ಲಿಂಗಾಯತರಿಗೂ ಬಿಜೆಪಿ ಕೈಕೊಡಲಿದೆ' ಎಂದು ಕುಮಾರಸ್ವಾಮಿ ಕುಟುಕಿದರು.
ಪ್ರಧಾನಿ ಇಂದು ಯಾವ ದೇಶಕ್ಕೂ ಹೋಗುತ್ತಿಲ್ಲ, ಯಾಕೆಂದರೆ ಸಿಎಎ ಕಾರಣಕ್ಕೆ ಅವರನ್ನು ಯಾವ ದೇಶವೂ ಕರೆಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ವ್ಯಾಖ್ಯಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.