ಬೆಂಗಳೂರು: ‘ಪ್ರಧಾನಿ ಮೋದಿ ಅವರಂತೆ ಸುಳ್ಖು ಪ್ರಚಾರ ಮಾಡಿ, ಯೋಜನೆಗಳನ್ನು ಘೋಷಿಸಿಲ್ಲ. ನುಡಿದಂತೆ ನಡೆದು, ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಲಕ್ಷ್ಮೀ ಬಡಾವಣೆಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.
‘5 ಐದು ವರ್ಷಗಳ ಕಾಲ. ರೈತರ ಬಗ್ಗೆ ಯೋಚಿಸದ ಮೋದಿ, ಇದೀಗ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ರೈತರ ಕಾಳಜಿಗೆ ಮುಂದಾಗಿದ್ದು, ‘ಕಿಸಾನ್ ಸಮ್ಮಾನ್’ ಯೋಜನೆಯ ಹೆಸರಿನಲ್ಲಿ ₹ 6,000 ನೀಡಲು ಮುಂದಾಗಿದೆ. ಅಲ್ಲದೇ ಜನರ ಹಣವನ್ನು ಜನರಿಗೆ ಲಂಚವಾಗಿ ನೀಡುವ ಮೂಲಕ ಮತಯಾಚನೆಗೆ ಮುಂದಾಗಿದೆ’ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.
ರೈತರ ಸಾಲಮನ್ನಾ ಪಾಪದ ಕೆಲಸ ಎಂದು ಹೇಳಿಕೆ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ, ‘ಹಾಲು ಉತ್ಪಾದಕ ಗ್ರಾಮೀಣ ಮಹಿಳೆಯರಿಗೆ ಸಬ್ಸಿಡಿಗೆ ನೀಡಲು ಸುಮಾರು ₹2,500 ಕೋಟಿ ನೀಡಲಾಗುತ್ತಿದೆ. ಸರ್ಕಾರದಿಂದ ಅಭಿವೃದ್ಧಿಗಾಗಿ, ಯೋಜನೆಗಳಿಗೆ ಸಾಕಷ್ಟು ಹಣ ವ್ಯಯ ಮಾಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ರಾಜ್ಯದ ಕರ್ನಾಟಕ ಆರೋಗ್ಯ ಮುಂತಾದ ಯೋಜನೆಗಳನ್ನು ವಿಲೀನಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಪಾಲು ಅಧಿಕವಾಗಿದೆ. ಆದರೆ, ಮೋದಿಯವರ ಆಯುಷ್ಮಾನ್ ಭಾರತ ಯೋಜನೆ ಎಂದು ಪ್ರಚಾರ ನೀಡುತ್ತಿದ್ದಾರೆ. ದುಡ್ಡು ರಾಜ್ಯ ಸರ್ಕಾರದ್ದು, ಹೆಸರು ಮಾತ್ರ ಮೋದಿ ಅವರದ್ದು ಎನ್ನುವಂತಾಗಿದೆ' ಎಂದರು.
‘ಮೋದಿಯವರ ಪೊಳ್ಳು ಭಾಷಣಗಳಿಗೆ ಕನ್ನಡಿಗರು ಮರುಳಾಗಬಾರದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.