ಎಚ್ಡಿಕೆ
ಬೆಂಗಳೂರು: ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು, ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅದ್ಯಾರೋ ಸಂಸದ ಬಸವರಾಜು ಎಂಬ ವ್ಯಕ್ತಿ ‘ತುಮಕೂರು ಜಿಲ್ಲೆಯ ಜನರು ದೇವೇಗೌಡರಿಗೆ ಮತ ಹಾಕಬಾರದು. ಮತ್ತೆ ಅವರನ್ನು ಸೋಲಿಸಬೇಕು’ ಎಂದು ಹೇಳಿಕೆ ನೀಡಿದ್ದಾರೆ. ಇದು ದರ್ಪದ ಹೇಳಿಕೆ. ತುಮಕೂರು ಜಿಲ್ಲೆ ಆ ವ್ಯಕ್ತಿಯ ಕೊಡುಗೆ ಏನು? ದೇವೇಗೌಡರು ಏನೂ ಮಾಡಲಿಲ್ಲ ಎನ್ನುವ ನೀನು ಈಗ ಸಂಸದನಾಗಿದ್ದೀಯಲ್ಲ. ಏನು ಮಾಡಿದ್ದೀಯಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇವೇಗೌಡರು ಚುನಾವಣೆಗೆ ನಿಲ್ಲಬೇಕು. ನಾವು ಋಣ ತೀರಿಸಬೇಕು ಎಂದು ಸಹಕಾರ ಸಚಿವ ರಾಜಣ್ಣ ವ್ಯಂಗ್ಯವಾಗಿ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಯಾರೆಲ್ಲ ಋಣ ತೀರಿಸಿದ್ದಾರೆಂದು ನೋಡಿದ್ದೇವೆ. ಇವರೆಲ್ಲಾ ದೇವೇಗೌಡರ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದವರು. ದೇವೇಗೌಡರಿಗೆ ಆರೋಗ್ಯದ ಸಮಸ್ಯೆ ಇದ್ದರೂ, ಇವರ ಪರ ಪ್ರಚಾರ ಮಾಡಿದ್ದರು. ಗೆಲ್ಲಿಸಿದ್ದರು. ಆಗ ಕೇವಲ 700 ಮತಗಳ ಅಂತರದಿಂದ ಗೆದ್ದಿದ್ದನ್ನು ರಾಜಣ್ಣ ಮರೆತು ಮಾತನಾಡುತ್ದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.