ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬಿಸಿಯೂಟದ ಅಡುಗೆ ಪದಾರ್ಥಗಳನ್ನು ಶಾಲೆಯ ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ಮನೆಗೆ ಸಾಗಿಸಿದ್ದ ವಿಡಿಯೊ ತುಣುಕು ಸಾಮಾಜಿಕ ಜಾಣತಾಣಗಳಲ್ಲಿ ಹರಿದಾಡುತ್ತಿದೆ.
ಮುಖ್ಯ ಶಿಕ್ಷಕ ನಂದೀಶ್ ಅವರು ಅಡುಗೆ ಸಾಮಾನುಗಳನ್ನು ತುಂಬಿರುವ ಚೀಲವನ್ನು ಬೈಕ್ನಲ್ಲಿ ಇರಿಸಿ ತೆಗೆದುಕೊಂಡು ಹೋಗುತ್ತಿರುವುದು ಹಾಗೂ ಅಡುಗೆ ಸಿಬ್ಬಂದಿ ಕೂಡ ಗೋಣಿ ಚೀಲಗಳಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
‘ಬಿಸಿಯೂಟ ಸಿದ್ಧಪಡಿಸಲು ಬಳಸುವ ಪದಾರ್ಥಗಳನ್ನು ಶಿಕ್ಷಕರು ಹಾಗೂ ಸಿಬ್ಬಂದಿ ಮನೆಗೆ ಸಾಗಿಸುತ್ತಿದ್ದಾರೆ. ಜೊತೆಗೆ ಕೆಲವು ಸಿಬ್ಬಂದಿ ಸಮೀಪದ ಚಿಲ್ಲರೆ ಅಂಗಡಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಶಾಲೆಯ ಮುಖ್ಯ ಶಿಕ್ಷಕ ನಂದೀಶ್ ಹಾಗೂ ಅಡುಗೆ ಸಿಬ್ಬಂದಿ ಪ್ರಮೀಳಾ, ರಾಜಮ್ಮ, ರೇವಣ್ಣಮ್ಮ, ಶಾರದ, ಪುಟ್ಟಸಿದ್ದಮ್ಮ ಅವರು ಪ್ರತಿನಿತ್ಯ ಅಡುಗೆ ಎಣ್ಣೆ, ಅಕ್ಕಿ, ಬೆಳೆ ಮತ್ತಿತರ ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಾವು ಶಿಕ್ಷಣ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದರೂ ಯಾರು ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಈಗ ವಿಡಿಯೊ ವೈರಲ್ ಆಗಿದೆ. ಇನ್ನಾದರೂ ಇಲಾಖೆ ಎಚ್ಚರಗೊಳ್ಳಲಿ’ ಎಂದು ಗ್ರಾಮದ ಯುವಕರು ಆಗ್ರಹಿಸಿದ್ದಾರೆ.
ದೃಢ ಪಡಿಸಿದ ಬಿಇಒ: ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿ ಬಿಸಿಯೂಟದ ಆಹಾರ ಪದಾರ್ಥಗಳನ್ನೇ ಸಾಗಿಸುತ್ತಿದ್ದರು ಎಂಬುದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ ಅವರು ದೃಢಪಡಿಸಿದ್ದಾರೆ.
‘ವೈರಲ್ ಆಗಿರುವ ವಿಡಿಯೊ ನನಗೂ ಬಂದಿದೆ. ಪರಿಶೀಲನೆಗಾಗಿ ಶಾಲೆಗೆ ಭೇಟಿ ನೀಡಿ, ವಿಚಾರಣೆಯನ್ನೂ ನಡೆಸಿದ್ದೇನೆ. ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದುದು ಸತ್ಯ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಚಂದ್ರಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.