ADVERTISEMENT

‘ಶೇ 15ರಷ್ಟು ವೇತನ ಹೆಚ್ಚಳ ಶಿಫಾರಸು ಅವೈಜ್ಞಾನಿಕ’

ಆರೋಗ್ಯ ಇಲಾಖೆ: ಸಮಾನ ವೇತನಕ್ಕೆ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 21:01 IST
Last Updated 18 ಫೆಬ್ರುವರಿ 2021, 21:01 IST

ಬೆಂಗಳೂರು: ‘ಸಮಗ್ರ ಮಾನವ ಸಂಪನ್ಮೂಲ ನೀತಿ ರಚಿಸಿ, ವರದಿ ಸಲ್ಲಿಸಲು ಸರ್ಕಾರ ರಚಿಸಿದ ಸಮಿತಿಯು ಅವೈಜ್ಞಾನಿಕವಾಗಿ ವೇತನ ಶಿಫಾರಸು ಮಾಡಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸಬೇಕು’ ಎಂದು ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಒತ್ತಾಯಿಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿಯು, ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಕಡಿಮೆ ವೇತನ ನೀಡುತ್ತಿರುವುದನ್ನು ಒಪ್ಪಿಕೊಂಡಿತ್ತು. ಈ ಸಮಿತಿಯು ವೇತನವನ್ನು ಶೇ 15 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ.

‘ಕೋವಿಡ್ ಕಾಣಿಸಿಕೊಂಡ ಬಳಿಕ ದಿನದ ಎಲ್ಲ ಅವಧಿಯಲ್ಲಿ ನೌಕರರಿಂದ ಕೆಲಸ ಮಾಡಿಸಿಕೊಳ್ಳಲಾಗಿದೆ. ಸರ್ಕಾರಿ ಕಾಯಂ ವೈದ್ಯರಿಗೆ ಇತ್ತೀಚೆಗೆ ಭತ್ಯೆ ಹೆಚ್ಚಿಸಿ ಆದೇಶ ಮಾಡಲಾಗಿದೆ. ಅವರಿಗೆ ನೀಡುವ ಭತ್ಯೆಯ ಅರ್ಧದಷ್ಟು ಕೂಡ ನಮ್ಮ ನೌಕರರ ವೇತನ ಹೆಚ್ಚಳ ಮಾಡಿಲ್ಲ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಶಿಫಾರಸು ಅವೈಜ್ಞಾನಿಕ’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಯಮೋಜಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನೌಕರರಿಗೆ ಸಾಮಾಜಿಕ ಭದ್ರತೆ ಅಡಿಯಲ್ಲಿ ಎಲ್ಲ ಸೌಲಭ್ಯಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆನೌಕರರಿಗೆ ವಿಸ್ತರಿಸಬೇಕು. ಕಾರ್ಮಿಕರ ಭವಿಷ್ಯನಿಧಿ (ಪಿಎಫ್), ಇಎಸ್ಐ ಯೋಜನೆ ವ್ಯಾಪ್ತಿಗೆ ಎಲ್ಲ ನೌಕರರನ್ನು ಒಳಪಡಿಸಬೇಕು. ಕೋವಿಡ್‌ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ಪರಿಹಾರ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.