ADVERTISEMENT

ರಾಜ್ಯದ ಹಲವೆಡೆ ಉತ್ತಮ ಮಳೆ, ಕೂಡ್ಲಿಗಿಯಲ್ಲಿ ಆಲಿಕಲ್ಲು ಮಳೆಗೆ 12 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 20:36 IST
Last Updated 6 ಏಪ್ರಿಲ್ 2020, 20:36 IST
ದಾವಣಗೆರೆಯ ಪಿ.ಬಿ ರಸ್ತೆಯಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ ಮಳೆಗೆ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಪಿ.ಬಿ ರಸ್ತೆಯಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ ಮಳೆಗೆ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಕೆಲವು ಪ್ರದೇಶದಲ್ಲಿ ಕಟಾವಿಗೆ ಬಂದ ಬೆಳೆಗೆ ಹಾನಿಯಾಗಿದೆ.

ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕರಡಿಹಳ್ಳಿಯಲ್ಲಿಭಾನುವಾರ ತಡರಾತ್ರಿ ಸುರಿದ ಆಲಿಕಲ್ಲು ಮಳೆಗೆ 12 ಕುರಿಗಳು ಸತ್ತಿದ್ದು,
10ಕ್ಕೂ ಹೆಚ್ಚು ಕಡೆ ವೀಳ್ಯದೆಲೆ ಹಾಗೂಬಾಳೆ ತೋಟಗಳು ಹಾಳಾಗಿವೆ.ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತ ಹಾಗೂ ಬಾಳೆ ಬೆಳೆ ನೆಲಕಚ್ಚಿವೆ. ಸಂಡೂರು ತಾಲ್ಲೂಕಿನಲ್ಲಿ ಆರು ಮನೆಗಳು ಜಖಂಗೊಂಡಿವೆ.

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಸುತ್ತಮುತ್ತ ಸೋಮವಾರ ಗುಡುಗು ಸಹಿತ ಮಳೆಯಾಗಿದ್ದು, ಕಟಾವಿಗೆ ಬಂದಿದ್ದ ಗೋವಿನಜೋಳಕ್ಕೆ ಹಾನಿಯಾಗಿದೆ. ಶಿರಸಿ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸನಕೊಪ್ಪ, ಸುತ್ತಲಿನ ಹಳ್ಳಿಗಳಲ್ಲಿ ಬಿರುಸಿನ ಮಳೆ ಸುರಿದಿದೆ.

ADVERTISEMENT

ಬೆಳಗಾವಿ ಜಿಲ್ಲೆಯ ಕೆಲವೆಡೆ ಸೋಮವಾರ ತುಂತುರು ಮಳೆಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಣೆಬೆನ್ನೂರು, ಅಕ್ಕಿ ಆಲೂರು, ಹಾನಗಲ್‌‌ನಲ್ಲಿ ಮಳೆಯಾಗಿದೆ. ಗದಗದ ಮುಳಗುಂದದಲ್ಲೂ ಮಳೆಯಾಗಿದೆ.

ಬಿರುಸಿನ ಮಳೆ: ಕೊಡಗು ಜಿಲ್ಲೆಯ ವಿರಾಜಪೇಟೆ, ಮಾಯಮುಡಿ, ಗೋಣಿಕೊಪ್ಪಲು, ರುದ್ರಬೀಡು, ತಿತಿಮತಿ, ಸಿದ್ದಾಪುರ, ಮಗ್ಗುಲ, ನೆಲ್ಯಹುದಿಕೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ನಾಪೋಕ್ಲು ಭಾಗದಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆ ಸುರಿದು ತಂಪೆರೆಯಿತು.

ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.

ಸಾಧಾರಣ ಮಳೆ:ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿ,ಇಳೆಗೆ ತಂಪೆರೆ
ಯಿತು. ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ತಡರಾತ್ರಿ ಮಳೆ‌ ಸುರಿದಿದೆ.

ತುಮಕೂರು ಹಾಗೂ ಕೋಲಾರದಲ್ಲಿ ಹದವಾದ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.