ಬೆಂಗಳೂರು: ಕ್ಯಾನ್ಸರ್ ಗುಣಪಡಿಸುವ ಹರ್ಬಲ್ ಔಷಧಿ ವ್ಯಾಪಾರದ ನೆಪದಲ್ಲಿ ನಗರದ ಮುರಳೀಧರ್ ಎಂಬುವರಿಂದ ₹ 1.48 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾಗಿರುವ ಮುರಳೀಧರ್ ಅವರೇ ದೂರು ನೀಡಿದ್ದಾರೆ. ಆರೋಪಿಗಳಾದ ಸ್ಕೋಟ್ ಕಾಫೆಯಾ, ಜೋರ್ಡಾನ್ ಹಾಗೂ ಸುನೀತಾ ಶರ್ಮಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ದೂರುದಾರರು ಲಿಂಕ್ಡ್ ಇನ್ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಅಲ್ಲಿಯೇ ಅವರಿಗೆಸ್ಕೋಟ್ ಕಾಫೆಯಾನ ಪರಿಚಯ ಆಗಿತ್ತು. ತನ್ನದೊಂದು ಹರ್ಬಲ್ ಔಷಧ ತಯಾರಿಕಾ ಕಂಪನಿ ಇರುವುದಾಗಿ ಹೇಳಿದ್ದ ಸ್ಕೋಟ್, ಆ ಔಷಧದಿಂದ ಕ್ಯಾನ್ಸರ್ ಗುಣಪಡಿಸಬಹುದೆಂದು ತಿಳಿಸಿದ್ದ.’
‘ಹರ್ಬಲ್ ಔಷಧಿ ಮಾರಾಟ ವ್ಯಾಪಾರ ಮಾಡಿದರೆ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದೆಂದು ಸ್ಕೋಟ್ ಆಮಿಷವೊಡ್ಡಿದ್ದ. ಅದಾದ ನಂತರ ವೈದ್ಯನೆಂದು ಹೇಳಿಕೊಂಡು ಜೋರ್ಡಾನ್ ಎಂಬಾತ ಕರೆ ಮಾಡಿದ್ದ. ಆತನೂ ಹರ್ಬಲ್ ಔಷಧ ವ್ಯಾಪಾರಕ್ಕೆ ಪ್ರಚೋದಿಸಿದ್ದ. ವ್ಯಾಪಾರ ಆರಂಭಿಸಲು ಸುನೀತಾ ಶರ್ಮಾ ಎಂಬಾಕೆಯನ್ನು ಸಂಪರ್ಕಿಸುವಂತೆ ಹೇಳಿದ್ದ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಮುರಳೀಧರ್, ಸುನೀತಾಳನ್ನು ಸಂಪರ್ಕಿಸಿದ್ದರು. ವ್ಯಾಪಾರ ಆರಂಭಿಸಲು ಹಣ ಠೇವಣಿ ಇರಿಸಬೇಕೆಂದು ಆಕೆ ಹೇಳಿದ್ದಳು. ಅದನ್ನು ನಂಬಿದ್ದ ಮುರಳೀಧರ್, ಆಕೆ ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 1.48 ಕೋಟಿ ಜಮೆ ಮಾಡಿದ್ದರು. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.