ಬೆಂಗಳೂರು:ವಾಹನಗಳ ನೋಂದಣಿ ಪ್ರಮಾಣಪತ್ರಕ್ಕೆ (ಆರ್ಸಿ) ಈ ಹಿಂದಿನ ವ್ಯವಸ್ಥೆಯ ಅನುಸಾರ ಸ್ಮಾರ್ಟ್ ಕಾರ್ಡ್ ವಿತರಣೆ ಮುಂದುವರಿಸುವಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.
ಸ್ಮಾರ್ಟ್ ಕಾರ್ಡ್ ಆಧಾರಿತ ವಾಹನ ನೋಂದಣಿ ಪ್ರಮಾಣಪತ್ರಕ್ಕೆ (ಆರ್.ಸಿ) ಬದಲಾಗಿ ಎಲೆಕ್ಟ್ರಾನಿಕ್ ಅಥವಾ ಆನ್ಲೈನ್ ವಿಧಾನದ ಮೂಲಕ ಆರ್.ಸಿ ವಿತರಿಸಲು ಕೈಗೊಂಡಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹಾಗೂ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಇದೇ ವೇಳೆ, ವಾಹನಗಳ ನೋಂದಣಿಯನ್ನು, ಅಕ್ಟೋಬರ್ 31ರ ಅಧಿಸೂಚನೆ ಹೊರಡಿಸುವುದಕ್ಕೂ ಮೊದಲೇ ಇದ್ದ ವ್ಯವಸ್ಥೆಯಂತೆಯೇ ನಡೆಸಬಹುದು ಎಂದೂ ಸೂಚಿಸಿರುವ ನ್ಯಾಯಪೀಠ ಅಕ್ಟೋಬರ್ 31ರ ಅಧಿಸೂಚನೆ ಪ್ರಕಾರ ಮಾಡಲಾಗುವ ವಾಹನ ನೋಂದಣಿಗಳು, ಈ ಅರ್ಜಿ ಕುರಿತಂತೆ ನ್ಯಾಯಪೀಠ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ,ಅರ್ಜಿಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದು, ವಿಚಾರಣೆಯನ್ನು 2022ರ ಜನವರಿ 31ಕ್ಕೆ ಮುಂದೂಡಿದೆ.
ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು, ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲೇ ಎಲೆಕ್ಟ್ರಾನಿಕ್ ಅಥವಾ ಆನ್ಲೈನ್ ಮೂಲಕ ಆರ್.ಸಿ ವಿತರಿಸುವ ಸಂಬಂಧ 2021ರ ಅಕ್ಟೋಬರ್ 31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನುಸ್ಮಾರ್ಟ್ ಕಾರ್ಡ್ ಆಧಾರಿತ ಆರ್.ಸಿ ವಿತರಣಾ ಸಂಸ್ಥೆಯಾದ, ರೂಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಪ್ರಶ್ನಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.