
ಬೆಂಗಳೂರು: ‘ಸೇವಾ ನಿವೃತ್ತಿ ಹೊಂದಿದ ಸಾರಿಗೆ ನೌಕರರ ರಜೆ ಅವಕಾಶಗಳ ನಗದೀಕರಣ ಲಾಭದ ಮೊತ್ತವನ್ನು 25 ತಿಂಗಳ ನಂತರ ತಡವಾಗಿ ನೀಡುವ ಮೂಲಕ ವಿಳಂಬ ಧೋರಣೆ ತೋರಿರುವ ಕಾರಣ ಆ ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿ ಸೇರಿಸಿ ಕೊಡಬೇಕು’ ಎಂದು ಹೈಕೋರ್ಟ್, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಎನ್ಡಬ್ಲ್ಯುಕೆಆರ್ಟಿಸಿ) ಆದೇಶಿಸಿದೆ.
ಈ ಸಂಬಂಧ ಕಂಡಕ್ಟರ್ ಆಗಿ ಸೇವಾ ನಿವೃತ್ತಿ ಹೊಂದಿರುವ ಧಾರವಾಡ ಜಿಲ್ಲೆಯ ಹೆಬಸೂರಿನ ಯಲ್ಲಪ್ಪ ರಾಮಪ್ಪ ಅಳಗವಾಡಿ (65) ಸೇರಿದಂತೆ 35ಕ್ಕೂ ಹೆಚ್ಚು ಕಂಡಕ್ಟರ್ಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಭಾಗಶಃ ಪುರಸ್ಕರಿಸಿದೆ.
‘ಒಂದು ವೇಳೆ ಪ್ರತಿವಾದಿ ಸಾರಿಗೆ ನಿಗಮದ ವಿಭಾಗವು ಅರ್ಜಿದಾರರಿಗೆ ನಿಗದಿತ ಸಮಯದೊಳಗೆ ಸೂಚಿತ ಬಡ್ಡಿ ಹಣವನ್ನು ಪಾವತಿಸಲು ವಿಫಲವಾದರೆ, ಮೊತ್ತವು ಬಾಕಿ ಉಳಿದ ದಿನಾಂಕದಿಂದ, ಪ್ರತಿಯೊಬ್ಬ ಅರ್ಜಿದಾರರ ಮನೆ ಬಾಗಿಲಿಗೆ ತಲುಪುವತನಕ ವಾರ್ಷಿಕ 9ರಷ್ಟು ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಎಚ್ಚರಿಸಿದೆ.
ವಿಚಾರಣೆ ವೇಳೆ ನಿಗಮದ ಪರ ಹೈಕೋರ್ಟ್ನ ಹಿರಿಯ ವಕೀಲೆ ಎಚ್.ಆರ್.ರೇಣುಕಾ ಅವರು, ‘ನಿಗಮವು ಬಡ್ಡಿಯನ್ನು ಪಾವತಿಸಲು ಹಿಂಜರಿಯುವುದಿಲ್ಲ. ಶೇ 6ರಷ್ಟು ಬಡ್ಡಿಯನ್ನು ಪಾವತಿಸಲು ಬದ್ಧವಾಗಿದೆ ಮತ್ತು ವಿಳಂಬಿತ ಪಾವತಿಗೆ ಬಡ್ಡಿಯನ್ನೂ ಪಾವತಿಸುತ್ತದೆ. ಆದರೆ ನೌಕರರು ಕೇಳುವ ದರಗಳಲ್ಲಿ ಅಲ್ಲ’ ಎಂದು ಪ್ರತಿಪಾದಿಸಿದ್ದರು.
‘ನಿಗಮವು ಈಗ ದೊಡ್ಡಮಟ್ಟದ ತೊಂದರೆ ಎದುರಿಸುತ್ತಿದೆ. ಸಂಸ್ಥೆಯ ಬಾಹುಳ್ಯ ವಿಶಾಲವಾಗಿದ್ದು ಅರ್ಜಿದಾರರ ಕೋರಿಕೆಯಂತೆ ಶೇ 9ರಷ್ಟು ಬಡ್ಡಿ ದರ ಮಂಜೂರು ಮಾಡಬೇಕೆಂದರೆ ಕಷ್ಟವಾಗುತ್ತದೆ. ಶೇ 3ರಷ್ಟು ಹೆಚ್ಚಿನ ಬಡ್ಡಿಯನ್ನು ವಿಧಿಸಿದ್ದೇ ಆದರೆ ಅದು ಹಲವಾರು ಕೋಟಿ ರೂಪಾಯಿಗಳ ಹೊರೆಯಾಗುತ್ತದೆ. ಹಾಗಾಗಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಬೇಕು ಮತ್ತು ಶೇ 6ಕ್ಕೇ ಸೀಮಿತಗೊಳಿಸಬೇಕು’ ಎಂದು ಕೋರಿದ್ದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಸಾರಿಗೆ ನಿಗಮ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬೇಕು’ ಎಂದು ಎನ್ಡಬ್ಲ್ಯುಕೆಆರ್ಟಿಸಿಗೆ ತಾಕೀತು ಮಾಡುವ ಮೂಲಕ ಅರ್ಜಿದಾರರ ಪರ ವಕೀಲರು ಕೋರಿದ್ದ ಶೇ 9 ಅಥವಾ 7ರಷ್ಟು ಬಡ್ಡಿ ದರ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿ ಶೇ 6ಕ್ಕೆ ಸೀಮಿತಗೊಳಿಸಿ ಆದೇಶಿಸಿದೆ.
ಕೋರಿಕೆ ಏನಿತ್ತು?: ‘ಸೇವಾ ನಿವೃತ್ತಿ ಹೊಂದಿರುವ ನಮಗೆ ತಡವಾಗಿ ನೀಡಲಾದ ಸಂಬಳಕ್ಕೆ (ರಜೆ ಅವಕಾಶಗಳ ನಗದೀಕರಣ ಲಾಭದ ಹಣ) ವಾರ್ಷಿಕ ಶೇ 12ರಷ್ಟು ಬಡ್ಡಿ ವಿಧಿಸುವಂತೆ ಪ್ರತಿವಾದಿಗಳಾದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ, ಧಾರವಾಡ ಗ್ರಾಮೀಣ ಮತ್ತು ಶಿರಸಿ ವಿಭಾಗಗಳ ಪ್ರಬಂಧಕರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.