ಬೆಂಗಳೂರು: ‘ಅತ್ಯಾಚಾರಕ್ಕೆ ಈಡಾದ ನಂತರ ಸುಸ್ತಾಗಿ ಮಲಗಿದ ಕಾರಣ ಪೊಲೀಸರಿಗೆ ದೂರು ನೀಡುವಲ್ಲಿ ಏಳು ದಿನಗಳ ವಿಳಂಬವಾಗಿದೆ ಎಂಬ ಸಂತ್ರಸ್ತೆ ಹೇಳಿಕೆ ಭಾರತೀಯ ನಾರಿಯ ಲಕ್ಷಣವಲ್ಲ’ ಎಂದು ಉಲ್ಲೇಖಿಸಿದ್ದ ಪದಗಳನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತೀರ್ಪಿನಿಂದ ತೆಗೆದು ಹಾಕಿದೆ.
ಈ ಕುರಿತಂತೆ ರಾಜ್ಯ ಪ್ರಾಸಿಕ್ಯೂಷನ್ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪುರಸ್ಕರಿಸಿದೆ.
ಪ್ರಾಸಿಕ್ಯೂಷನ್ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರ ಆರೋಪಿ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು, ‘ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಗೆ ನಮ್ಮ ತಕರಾರುಇಲ್ಲ’ ಎಂದು ಲಿಖಿತ ಉತ್ತರ ಸಲ್ಲಿಸಿದರು.
ನ್ಯಾಯಪೀಠ ಇದನ್ನು ಮಾನ್ಯ ಮಾಡಿದೆ. ಸಾರ್ವಜನಿಕ ಚರ್ಚೆಗೆ ಕಾರಣವಾಗಿದ್ದ ಉಲ್ಲೇಖಿತ ಅಭಿಪ್ರಾಯವನ್ನು ತೀರ್ಪಿನಿಂದ ಕೈಬಿಟ್ಟಿದೆ.
ತೀರ್ಪು ಹೊರಬಿದ್ದ ನಂತರ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಪ್ರಗತಿಪರ ಸಂಘಟನೆಗಳು ನ್ಯಾ.ಕೃಷ್ಣ ದೀಕ್ಷಿತ್ ಅವರಿಗೆ ಬಹಿರಂಗ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಆಕ್ಷೇಪಕ್ಕೆ ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ ಹೆಗ್ಡೆ, ವಕೀಲರ ಪರಿಷತ್ ಸದಸ್ಯ ಎಸ್.ಬಸವರಾಜ್, ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯ, ಎಸ್.ಪಿ.ಶಂಕರ್, ‘ಈ ರೀತಿ ಪತ್ರ ಬರೆಯುವ ಕ್ರಮ ಸಾಧುವಲ್ಲ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.