ADVERTISEMENT

ಬೈಕ್‌ನಲ್ಲಿ ಹೆಚ್ಚಿನ ಪ್ರಯಾಣಿಕರಿದ್ದರೆ ಶೇ 100ರಷ್ಟು ಪರಿಹಾರ ಇಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ‘ದ್ವಿಚಕ್ರ ವಾಹನದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರಿದ್ದು, ಅದು ಅಪಘಾತಕ್ಕೀಡಾದರೆ ಅದಕ್ಕೆ ಸವಾರರ ನಿರ್ಲಕ್ಷ್ಯವೂ ಕಾರಣ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ‘ಈ ಅಂಶದ ಆಧಾರದಡಿ ಶೇ 100ರಷ್ಟು ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

ಐಸಿಐಸಿಐ ಲ್ಯಾಂಬೋರ್ಡ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಂಪನಿಯ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿದ್ದು,  ಅಪಘಾತ ನ್ಯಾಯಮಂಡಳಿ ನಿಗದಿಪಡಿಸಿದ್ದ ಪರಿಹಾರ ಆದೇಶವನ್ನು ಮಾರ್ಪಾಡು ಮಾಡಿದೆ.

ಈ ಪ್ರಕರಣದಲ್ಲಿ ‘ಬೈಕ್‌ನಲ್ಲಿ ಮೂವರು ಸವಾರಿ ಮಾಡುತ್ತಿದ್ದರೆಂಬುದು ಸಾಬೀತಾಗಿದೆ. ಆಸ್ಪತ್ರೆಯಲ್ಲಿನ ಎಂಎಲ್‌ಸಿ ವಿವರಗಳಲ್ಲಿಯೂ ಮೂವರೂ ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆದಿರುವುದು ದಾಖಲಾಗಿದೆ. ಹೀಗಾಗಿ, ಪರಿಹಾರ ಕೋರಿರುವವರದ್ದೂ ಶೇ 20ರಷ್ಟು ನಿರ್ಲಕ್ಷ್ಯ ಇರುವ ಕಾರಣ ವಿಮಾ ಕಂಪನಿಯಿಂದ ಅರ್ಜಿದಾರರು ಶೇ 80ರಷ್ಟು ಮಾತ್ರವೇ ಪರಿಹಾರ ಪಡೆಯಲು ಅರ್ಹರು’ ಎಂದು ನ್ಯಾಯಪೀಠ ಆದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.