ಬೆಂಗಳೂರು: ‘2016-17 ಮತ್ತು 2017-18ರ ಶೈಕ್ಷಣಿಕ ವರ್ಷಗಳಲ್ಲಿ ಪ್ರವೇಶ ಪಡೆದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯ ನಿಬಂಧನೆಗಳು ಅನ್ವಯವಾಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 2018-19 ಮತ್ತು ನಂತರದ ಸಾಲಿನ ವಿದ್ಯಾರ್ಥಿಗಳಿಗೆ ಮಾತ್ರ ಈ ನಿಬಂಧನೆಗಳು ಅನ್ವಯವಾಗುತ್ತವೆ ಹೇಳಿದೆ.
2016-17, 2017-18ನೇ ಸಾಲಿನ ಸ್ನಾತಕೋhighತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಗಳು ಈ ನಿಬಂಧನೆ ಅನ್ವಯ ಮಾಡುವುದನ್ನು ಪ್ರಶ್ನಿಸಿದ್ದರು.
‘ಕರ್ನಾಟಕ ಕಡ್ಡಾಯ ಸೇವಾ ತರಬೇತಿ ಕಾಯ್ದೆಗೆ ಸಂಬಂಧಿಸಿದ ಅಧಿಸೂಚನೆ 2015ರ ಜುಲೈ 24ರಂದು ಹೊರ ಬಿದ್ದಿದೆ. ಆದರೆ, 2017-18ನೇ ಶೈಕ್ಷಣಿಕ ವರ್ಷಕ್ಕೆ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ(ನೀಟ್) ಸಂದರ್ಭದಲ್ಲಿ ಹೊರಡಿಸಲಾದ ಮೂರು ಪ್ರಕಟಣೆಗಳಲ್ಲಿ ಯಾವುದೇ ಸೇವೆ ಕಡ್ಡಾಯದ ಅಗತ್ಯವನ್ನು ತಿಳಿಸಿಲ್ಲ. ಈ ನಿಬಂಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ’ ಎಂದು ಅರ್ಜಿದಾರರು ವಾದಿಸಿದ್ದಾರೆ.
‘ಕಡ್ಡಾಯ ಸೇವೆ ಬಗ್ಗೆ 2018–19 ಮತ್ತು ನಂತರದ ವರ್ಷಗಳ ಸ್ನಾತಕೋತ್ತರ ಕೋರ್ಸ್ಗಳ ಅಭ್ಯರ್ಥಿಗಳಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಅದಕ್ಕೂ ಹಿಂದಿನ ವರ್ಷಗಳಲ್ಲಿ ಈ ರೀತಿಯ ಬಾಂಡ್ ಪಡೆದಿಲ್ಲ. ಹೀಗಾಗಿ, ಅವರ ಮೇಲೆ ಕಡ್ಡಾಯ ಸೇವೆಯ ನಿಯಮ ಹೇರಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.