ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾ ಅವರ ಪುತ್ರ ಗಗನ್ ಬಡೇರಿಯಾ ವಿರುದ್ಧದ ವಿಚಾರಣೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
‘ಗಗನ್ ಬಡೇರಿಯಾ ಬ್ಯಾಂಕ್ ಖಾತೆಗೆ ಕಂಪನಿಯೊಂದರಿಂದ ₹20 ಲಕ್ಷ ಸಂದಾಯವಾಗಿದೆ. ಅದಿರು ಸಾಗಣೆಗೆ ತಂದೆ ಅನುಮತಿ ನೀಡಿದ್ದಕ್ಕಾಗಿ ಸಂದಾಯವಾದ ಹಣ ಇದು’ ಎಂದು ಎಸ್ಐಟಿ(ವಿಶೇಷ ತನಿಖಾ ತಂಡ) ದೋಷಾರೋಪಣೆ ಸಲ್ಲಿಸಿತ್ತು.
‘ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಅನುಮತಿ ನೀಡದ ಕಾರಣ ಗಂಗಾರಾಂ ಬಡೇರಿಯಾ ಅವರ ವಿರುದ್ಧ ದೋಷಾರೋಪ ದಾಖಲಾಗಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡು ಆರೋಪಿಯನ್ನಾಗಿ ಮಾಡಲಾಗಿದೆ. ‘ಟ್ವೆಂಟಿ ಫಸ್ಟ್ ಸೆಂಚುರಿ ವೈರ್ ರಾಡ್ಸ್ ಲಿಮಿಟೆಡ್’ನಿಂದ ನನ್ನ ಖಾತೆಗೆ ಹಣ ಸಂದಾಯವಾಗಿದೆ. ಈ ಕಂಪನಿ ಗಣಿಗಾರಿಕೆಗೆ ಸಂಬಂಧಿಸಿದ ವ್ಯವಹಾರ ನಡೆಸುವುದಿಲ್ಲ ಮತ್ತು ಅವರ ಸಂಪರ್ಕದಲ್ಲೂ ಇಲ್ಲ. ಸಂಗೀತ ಉದ್ಯಮದ ವ್ಯವಹಾರಕ್ಕೆ ಸಂಬಂಧಿಸಿದ ಹಣ ಇದಾಗಿದೆ’ ಎಂದು ಗಗನ್ ಅರ್ಜಿಯಲ್ಲಿ ತಿಳಿಸಿದ್ದರು.
‘ವರ್ಗಾವಣೆ ಆಗಿರುವ ಹಣ ಸಂಗೀತ ಉದ್ಯಮಕ್ಕೆ ಸಂಬಂಧಿಸಿರುವುದೋ ಅಥವಾ ಬೇರಾವ ವ್ಯವಹಾರಕ್ಕೆ ಸಂಬಂಧಿಸಿದ್ದು ಎಂಬುದು ವಿಚಾರಣೆ ಪೂರ್ಣಗೊಂಡ ಮೇಲೆ ತಿಳಿಯಲಿದೆ’ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಗಂಗಾರಾಂ ಬಡೇರಿಯಾ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಯುಕ್ತರಾಗಿದ್ದಾಗ ಜಂತಕಲ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಕಂಪನಿ 1.17 ಲಕ್ಷ ಟನ್ ಕಬ್ಬಿಣದ ಅದಿರು ಸ್ಥಳಾಂತರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ಅದಿರು ಸಾಗಣೆ ಸಂಬಂಧ ಶಾಸನಬದ್ಧ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಿರಲಿಲ್ಲ. ಹಾಗಿದ್ದರೂ ಬಡೇರಿಯಾ ಅನುಮತಿ ಎಂದು ಆಪಾದಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.