
ಬೆಂಗಳೂರು: ‘ಅನಿಯಂತ್ರಿತ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಜಾ ಪ್ರಭುತ್ವದ ಅಪಾಯಕ್ಕೆ ಕಾರಣ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಕೆಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ್ದು, ಸಂಸ್ಥೆಗೆ ₹50 ಲಕ್ಷ ದಂಡ ವಿಧಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್ಗಳನ್ನು ಪ್ರಶ್ನಿಸಿ ಟ್ವಿಟರ್ನ ಅಧಿಕೃತ ಪ್ರತಿನಿಧಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ.
‘ಸುಳ್ಳು ಮತ್ತು ಉದ್ದೇಶ ಪೂರ್ವಕವಾದ ಅಸಂಬದ್ಧ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಲು ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ದೇಶದ ಸಮಗ್ರತೆ, ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯ ಬಳಕೆ ಹೆಚ್ಚಳವಾಗುತ್ತಿದೆ. ಸೀಮಿತ ಪದಮಿತಿ ಹೊಂದಿರುವ ಟ್ವಿಟರ್ ತಪ್ಪು ಮಾಹಿತಿ ಪಸರಿಸಿರುವ ವ್ಯಾಪಕ ಶಕ್ತಿ ಹೊಂದಿದೆ’ ಎಂಬ ಕೇಂದ್ರದ ನಿಲುವನ್ನು ನ್ಯಾಯಪೀಠ ಮನ್ನಿಸಿದೆ. ಕೇಂದ್ರದ ಪರ, ದಕ್ಷಿಣ ವಲ ಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಶಂಕರ ನಾರಾಯಣನ್ ಮತ್ತು ಎಂ.ಎನ್.ಕುಮಾರ್ ವಾದ ಮಂಡಿಸಿದ್ದರು.
₹ 50 ಲಕ್ಷ ದಂಡ: ‘ಅರ್ಜಿದಾರರು ಕಾರ್ಪೊರೇಟ್ ದಾವೆದಾರರಾಗಿದ್ದು ಸರಿಸುಮಾರು 5 ಬಿಲಿಯನ್ ಡಾಲರ್ ನಷ್ಟು ವಾರ್ಷಿಕ ವಹಿವಾಟು ಹೊಂದಿದವರಾಗಿದ್ದಾರೆ. ಈ ರಿಟ್ ಅರ್ಜಿಯ ಸುದೀರ್ಘ ವಿಚಾರಣೆ ವೇಳೆ ನಮ್ಮ ಸ್ಥಳೀಯ ಕಕ್ಷಿದಾರರಾದ ಕಾರ್ಮಿಕರು, ದಲಿತರು, ಬಡವರು, ಮಹಿಳೆಯರು ತಮ್ಮ ವ್ಯಾಜ್ಯಗಳ ವಿಚಾರಣೆಯಲ್ಲಿ ವಿಳಂಬ ಅನುಭವಿಸುವಂತಾಗಿದೆ. ಆದ್ದ ರಿಂದ, ₹50 ಲಕ್ಷ ದಂಡ ವಿಧಿಸಲಾಗುತ್ತಿದೆ’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
‘ದಂಡದ ಮೊತ್ತವನ್ನು 45 ದಿನಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಒಂದೊಮ್ಮೆ ವಿಫಲವಾದರೆ 45 ದಿನಗಳ ಬಳಿಕ ಪ್ರತಿದಿನ ಹೆಚ್ಚುವರಿಯಾಗಿ ₹5 ಸಾವಿರ ನೀಡಬೇಕು’ ಎಂದು ಆದೇಶಿ ಸಿದೆ.
ನಿರ್ಬಂಧ ಸಲ್ಲ: 2021ರ ಫೆಬ್ರುವರಿ ಯಿಂದ 2022ರ ಫೆಬ್ರುವರಿ ಮಧ್ಯದ ಅವಧಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶಿಸಿರುವ ಕೇಂದ್ರ ಸರ್ಕಾರ, ಇದಕ್ಕೆ ಸಕಾರಣ ನೀಡಿಲ್ಲ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಿರ್ಬಂಧ’ ಎಂದು ಆಕ್ಷೇಪಿಸಿ ಈ ಅರ್ಜಿ ಸಲ್ಲಿಸಲಾ ಗಿತ್ತು. ಸಂಸ್ಥೆಯ ಪರ ಹಿರಿಯ ವಕೀಲ ರಾದ ಅರವಿಂದ ದಾತಾರ್, ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದರು. ಮನು ಪಿ.ಕುಲಕರ್ಣಿ ವಕಾಲತ್ತು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.