ADVERTISEMENT

ಎನ್‌ಇಪಿಯನ್ನು ಒಳಗೊಂಡೇ ಎಸ್‌ಇಪಿ: ಸಚಿವ ಸುಧಾಕರ್

ವಿಧಾನ ಪರಿಷತ್‌ನಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 14:53 IST
Last Updated 8 ಡಿಸೆಂಬರ್ 2023, 14:53 IST
<div class="paragraphs"><p>ಡಾ.ಎಂ.ಸಿ.ಸುಧಾಕರ್</p></div>

ಡಾ.ಎಂ.ಸಿ.ಸುಧಾಕರ್

   

ವಿಧಾನ ಪರಿಷತ್‌(ಬೆಳಗಾವಿ): ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದು ಮಾಡಿಲ್ಲ. ಅದರಲ್ಲಿನ ಉತ್ತಮ ಅಂಶಗಳನ್ನೂ ಒಳಗೊಂಡು ಅತ್ಯುತ್ತಮ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರೂಪಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.

ಎನ್‌ಇಪಿ ಮೇಲಿನ ಮುಂದುವರಿದ ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಅವರು, ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ವರ್ಷಕ್ಕೆ ಎನ್‌ಇಪಿ ಮುಂದುವರಿಸಲಾಗಿದೆ. ಈಗಾಗಲೇ ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ಎಸ್‌ಇಪಿ ಆಯೋಗ ರಚನೆ ಮಾಡಲಾಗಿದೆ ಎಂದರು.

ADVERTISEMENT

ಪೂರ್ವಸಿದ್ಧತೆ ಇಲ್ಲದೆ, ಅಗತ್ಯ ಸೌಕರ್ಯ ಕಲ್ಪಿಸದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಹಿಂದಿನ ಸರ್ಕಾರ ತರಾತುರಿಯಲ್ಲಿ ಎನ್‌ಇಪಿ ಜಾರಿಗೆ ತಂದಿತು. ಗುಜರಾತ್‌ ಸೇರಿದಂತೆ ಅವರದೇ ಪಕ್ಷದ ಆಡಳಿತವಿದ್ದ ರಾಜ್ಯಗಳಲ್ಲಿ ಇಂದಿಗೂ ಸಿದ್ಧತೆ ಪೂರ್ಣಗೊಂಡಿಲ್ಲ. ಪದವಿಯಲ್ಲಿ ಬಹು ನಿರ್ಗಮನ ಪದ್ಧತಿಯಿಂದಾಗಿ ಹಲವು ವಿದ್ಯಾರ್ಥಿಗಳು ಮಧ್ಯದಲ್ಲೇ ಪದವಿ ತೊರೆಯಲು ಕಾರಣವಾಗಿದೆ. ಏಕ ಕಾಲಕ್ಕೆ ಎರಡು ಕೋರ್ಸ್‌ ಮಾಡುವ ಅವಕಾಶವೂ ಅವೈಜ್ಞಾನಿಕ ಎಂದು ಟೀಕಿಸಿದರು.

ರಾಜ್ಯದಲ್ಲಿ  ಬೋಧಕರ ಕೊರತೆ ಇದೆ. ಹಲವು ದಶಕಗಳಿಂದ ನೇಮಕಾತಿ ನಡೆದಿಲ್ಲ. ಕಲಾ ವಿದ್ಯಾರ್ಥಿಯೊಬ್ಬ ವಿಜ್ಞಾನದ ಒಂದು ವಿಷಯ ತೆಗೆದುಕೊಂಡರೆ ಆ ಕಾಲೇಜಿನಲ್ಲಿ ಅಗತ್ಯ ಪ್ರಯೋಗಾಲಯ ಬೇಕಿರುತ್ತದೆ. ಅದಕ್ಕೆ ತಕ್ಕಂತಹ ಸೌಕರ್ಯ ಒದಗಿಸದೇ ಹೊಸ ನೀತಿ ಅನುಷ್ಠಾನಗೊಳಿಸಿದರೆ ಆ ವಿದ್ಯಾರ್ಥಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಇಂತಹ ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡು, ಇತರೆ ರಾಜ್ಯಗಳು, ಹಿಂದಿನ ಶಿಕ್ಷಣ ನೀತಿಯನ್ನು ಪರಿಶೀಲಿಸಿ, ಎನ್‌ಇಪಿಗೆ ವಿರುದ್ಧವಲ್ಲದ ಸಮಗ್ರ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.