ಕೆಂಭಾವಿ (ಯಾದಗಿರಿ ಜಿಲ್ಲೆ): ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪಿನ ಬಳಿಕವೂ ಸುರಪುರ ತಾಲ್ಲೂಕಿನ ಕೆಂಭಾವಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಂಟು ವಿದ್ಯಾರ್ಥಿನಿಯರು ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೇ ಮನೆಗೆ ಮರಳಿದರು.
ಎರಡು ದಿನಗಳಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾಪರೀಕ್ಷೆ ನಡೆಯುತ್ತಿದ್ದು, ಮಂಗಳವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಇತ್ತು. ಒಟ್ಟು 29 ವಿದ್ಯಾರ್ಥಿನಿಯರಲ್ಲಿ ಕಾಲೇಜಿಗೆ ಬಂದ 12 ವಿದ್ಯಾರ್ಥಿನಿಯರ ಪೈಕಿ ನಾಲ್ವರು ಹಿಜಾಬ್ ತೆಗೆದು ಪರೀಕ್ಷೆ ಬರೆದರು.
ಆದೇಶ ಪಾಲಿಸಲ್ಲ:‘ಹಿಜಾಬ್ ಧರಿಸಿಯೇ ಪೂರ್ವ ಸಿದ್ಧತಾ ಪರೀಕ್ಷೆ ಬರೆಯುತ್ತೇವೆ. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ನಮಗೆ ಒಪ್ಪಿಗೆ ಇಲ್ಲ. ಹೈಕೋರ್ಟ್ ಆದೇಶ ಬಂದರೂ ಹಿಜಾಬ್ ಧರಿಸುತ್ತೇವೆ’ ಎಂದು ಯಾದಗಿರಿ ಪದವಿಪೂರ್ವ ಪ್ರಥಮ ವರ್ಷದ ವಿದ್ಯಾರ್ಥಿನಿ ಆಸ್ರಾ ಹೇಳಿದರು.
‘ಹಿಜಾಬ್ಗೆ ಅನುಮತಿ ನೀಡಿದರಷ್ಟೆ ತರಗತಿಗೆ ಹಾಜರು’
ಹಾಸನ: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನವ್ಯಕ್ತಪಡಿಸಿರುವ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುವಿದ್ಯಾರ್ಥಿಗಳು, ‘ಹಿಜಾಬ್ ಧರಿಸಲು ಅನುಮತಿ ನೀಡುವವರೆಗೂ ತರಗತಿಗೆ ಹಾಜರಾಗುವುದಿಲ್ಲ. ಅನುಮತಿ ನೀಡದಿದ್ದರೆ ಪರೀಕ್ಷೆಗೂ ಹಾಜರಾಗುವುದಿಲ್ಲ’ ಎಂದು ಹೇಳಿದ್ದಾರೆ.
‘ನಾಲ್ಕು ವರ್ಷಗಳಿಂದ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದೇವೆ.ಆದರೆ ಈಗೇಕೆ ವಿರೋಧ ವ್ಯಕ್ತವಾಯಿತು? ಈಗಾಗಲೇ ತರಗತಿಗಳಿಲ್ಲದೆ ಸರಿಯಾಗಿ ಓದಲು ಆಗಿಲ್ಲ. ಪರೀಕ್ಷೆಸಮೀಪಿಸುತ್ತಿದ್ದು ತೊಂದರೆಯಾಗಿದೆ. ಕೋರ್ಟ್ ತೀರ್ಪು ಸಮಾಧಾನ ತಂದಿಲ್ಲ. ಶಿಕ್ಷಣದ ಜತೆಗೆ ಹಿಜಾಬ್ ಬೇಕು’ಎಂದು ಪಟ್ಟು ಹಿಡಿದರು.
‘ಒಂದು ತಿಂಗಳಿನಿಂದ ತರಗತಿ ಬಹಿಷ್ಕರಿಸಿದ್ದೇವೆ. ಈ ಆದೇಶದಿಂದ ಪೋಷಕರು ಕಾಲೇಜಿಗೆ ಹೋಗುವುದೇ ಬೇಡ ಎಂದಿದ್ದಾರೆ. ಅವರ ಮಾತು ಮೀರುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.