ರಾಮನಗರ: ‘ಕೇಸರಿ ಬಟ್ಟೆ ಇಲ್ಲವೇ ಹಿಜಾಬ್ ಹಾಕಿಕೊಂಡ ತಕ್ಷಣ ಸಮಾಜ ಉದ್ಧಾರ ಆಗುವುದಿಲ್ಲ. ಇದನ್ನೆಲ್ಲ ನೋಡಿದರೆ ನಮ್ಮ ರೈತ ಮಕ್ಕಳು ಹಳ್ಳಿ ಶಾಲೆಗಳಿಗೆ ಹಸಿರು ಶಾಲು ಹಾಕಿಕೊಂಡು ಹೋಗಿ ಎಂದು ಕರೆ ಕೊಡಬೇಕಾಗುತ್ತದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ಹಿಜಾಬ್– ಕೇಸರಿ ಶಾಲು ವಿಚಾರವನ್ನು ಬಳಸಿಕೊಂಡು ಸಮಾಜ ಒಡೆಯುವ ಕೆಲಸ ಮಾಡಬಾರದು. ಕೆಲವು ಸಂಘಟನೆಗಳು ಹೆಣ್ಣು ಮಕ್ಕಳನ್ನು ಪ್ರಚೋದಿಸುತ್ತಿವೆ. ಮತ್ತೊಂದೆಡೆ, ಎರಡು ರಾಜಕೀಯ ಪಕ್ಷಗಳು ಮತ ಪಡೆಯಲು ಒಂದೊಂದು ಸಮಾಜಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಮಕ್ಕಳು ಕೆಲವು ಸಂಘಟನೆಗಳ ಚಿತಾವಣೆಗೆ ಬಲಿಯಾಗಬೇಡಿ’ ಎಂದರು.
‘ಸಮಾಜದಲ್ಲಿ ಬೇರೆ ಬೇರೆ ಸಮಸ್ಯೆಗಳು ಜಾಸ್ತಿ ಇವೆ. ಅದರ ಬಗ್ಗೆ ಗಮನ ಹರಿಸಬೇಕು. ಈ ವಿಚಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡಬಾರದು. ಶಾಲಾ ಮಕ್ಕಳಲ್ಲಿ ಸಂಕುಚಿತ ಮನೋಭಾವನೆ ಉಂಟು ಮಾಡಿ ದ್ವೇಷದ ರಾಜಕಾರಣದ ಬೆಂಕಿ ಹಚ್ಚಬೇಡಿ. ಧರ್ಮವನ್ನು ಉದ್ದಾರ ಮಾಡುವ ಕೆಲಸ ರಾಜಕಾರಣಿಗಳಿಗೆ ಬೇಡ. ಅದನ್ನು ಜನಸಾಮಾನ್ಯರೇ ಮಾಡುತ್ತಾರೆ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.