ADVERTISEMENT

ಹಿಪ್ಪರಗಿ ಬ್ಯಾರೇಜ್‌: ಮುರಿದು ಬಿದ್ದ ಗೇಟ್‌ ದುರಸ್ತಿ; ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:40 IST
Last Updated 27 ಜನವರಿ 2026, 15:40 IST
ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ   

ಬೆಂಗಳೂರು: ‘ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ನ ಮುರಿದು ಬಿದ್ದಿರುವ ಗೇಟ್‌ ದುರಸ್ತಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ 21 ಗೇಟ್‌ಗಳನ್ನು ಬದಲಿಸಲು ಕೇಂದ್ರ ಸರ್ಕಾರಕ್ಕೆ ತಾಂತ್ರಿಕ ಮೌಲ್ಯಮಾಪನಾ ವರದಿ ಸಲ್ಲಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಪರವಾಗಿ ಕೃಷ್ಣ ಬೈರೇಗೌಡ ಉತ್ತರಿಸಿದರು. ‘ಹಿಪ್ಪರಗಿ ಬ್ಯಾರೇಜ್‌ನ ಗೇಟ್‌ ನಂ. 22ರ 2ನೇ ಎಲಿಮೆಂಟ್‌ ಜ. 6ರಂದು ನೀರಿನ ಒತ್ತಡಕ್ಕೆ ಕಿತ್ತುಹೋಗಿದೆ. 9ರಂದು ತಾತ್ಕಾಲಿಕವಾಗಿ ತುರ್ತು ತಡೆ ಗೇಟ್‌ ಅಳವಡಿಸಲಾಗಿದೆ. 12ರಂದು ಹೊಸ ಗೇಟ್‌ ಅಳವಡಿಕೆಗೆ ₹ 1.40 ಕೋಟಿ ಅನುಮೋದನೆ ನೀಡಿ, 17ರಂದು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಉಳಿದ ಗೇಟುಗಳನ್ನು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ’ ಎಂ‌ದರು.

ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ರಾಜು ಕಾಗೆ, ‘ಗೇಟ್‌ ಮುರಿದ ಪರಿಣಾಮ ಹೆಚ್ಚಿನ ನೀರು ಪೋಲಾಗಿದೆ. ಮಹಾರಾಷ್ಟ್ರದಿಂದ ಬರಬೇಕಿರುವ ಎರಡು ಟಿಎಂಸಿ ಅಡಿ ನೀರನ್ನು ಕೃಷ್ಣಾ ನದಿಗೆ ಹರಿಸಿ ನಂತರ ಬ್ಯಾರೇಜ್‌ಗೆ ಹರಿಸಬೇಕು’ ಎಂದು ‌ಕೋರಿದರು.

ADVERTISEMENT

ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಸದ್ಯ ಬ್ಯಾರೇಜ್‌ನಲ್ಲಿ 3.90 ಟಿಎಂಸಿ ಅಡಿ ನೀರಿದೆ. 550 ಕ್ಯುಸೆಕ್ ಒಳಹರಿವಿದೆ. ಹೀಗಾಗಿ, ಈ ಬಾರಿಯ ಬೇಸಿಗೆಗೆ ನೀರಿನ ಸಮಸ್ಯೆ ಆಗುವುದಿಲ್ಲ. ಬಾಗಲಕೋಟೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜ. 9ರಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಬೇಸಿಗೆ ಮುಗಿಯುವವರೆಗೆ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರನ್ನು ಸಮರ್ಪಕ ಮತ್ತು ನಿಯಂತ್ರಣ ಬಳಕೆಗೆ ಸೂಚಿಸಲಾಗಿದೆ’ ಎಂದರು.

‘ನೀರಿನ ಕೊರತೆ ಉಂಟಾದರೆ ಮಹಾರಾಷ್ಟ್ರದ ವಾರಣಾ ಅಥವಾ ಕೊಯ್ನಾ ಜಲಾಶಯದಿಂದ ‌ಕೃಷ್ಣಾ ನದಿ ಪಾತ್ರದಲ್ಲಿನ ಹಿಪ್ಪರಗಿ ಬ್ಯಾರೇಜಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಅವರಿಂದ ಪತ್ರ ಬರೆಯಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.