ಚಿಕ್ಕಮಗಳೂರು: ‘ಮೈಸೂರು ರಂಗಾಯಣದಲ್ಲಿ ನಡೆದ ‘ಬಹುರೂಪಿ’ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮದಲ್ಲಿ ನಾನು ಆಡಿರುವ ಮಾತುಗಳ ಹಿಂದೆ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಅವು ಹಾಸ್ಯಪ್ರಜ್ಞೆಯಿಂದ ಹೇಳಿದ ಮಾತುಗಳಷ್ಟೇ ಆಗಿದ್ದು, ಹಾಸ್ಯದ ಗೆರೆ ಮೀರಿದ್ದೇನೆ ಎಂದು ಯಾರಿಗಾದರೂ ಅನ್ನಿಸಿದ್ದಲ್ಲಿ, ಅನ್ಯಥಾ ಭಾವಿಸದಿರಲು ಕೋರುತ್ತೇನೆ’ ಎಂದು ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ಬಹುರೂಪಿ ರಂಗೋತ್ಸವದಲ್ಲಿ ಅವರು ಆಡಿರುವ ಮಾತುಗಳ ಬಗ್ಗೆ ವ್ಯಾಪಕ ಟೀಕೆಗಳು ಬಂದಿದ್ದವು. ಅದಕ್ಕೆ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿರುವ ಕಣ್ಣನ್, ‘ನಾನು ಪ್ರಾರಂಭದಿಂದಲೂ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿಕೊಂಡು, ಅನುಸರಿಸಿಕೊಂಡು ಬಂದಿರುವಾತ. ನಿತ್ಯ ಜೀವನದಲ್ಲಿ ಹಾಸ್ಯಪ್ರಜ್ಞೆಯೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯುಳ್ಳವನು ಎಂಬುದನ್ನು ನನ್ನನ್ನು ಹತ್ತಿರದಿಂದ ಕಂಡವರಿಗೆ ಗೊತ್ತಿರುವ ವಿಚಾರ. ನಾನು ಯಾವಾಗಲೂ ಜಾತಿ, ಧರ್ಮ, ಮತ, ಪಂಥಗಳ ಆಚೆಗೆ ಆಲೋಚಿಸಿ ಬದುಕುತ್ತಿರುವವನು. ಹಾಸ್ಯದ ಧಾಟಿಯಲ್ಲಿ ನಾನಾಡುವ ಮಾತುಗಳಲ್ಲಿ ಯಾವುದೇ ದುರುದ್ದೇಶವಿರುವುದಿಲ್ಲ, ಅದಕ್ಕೆ ನನ್ನ ಬದುಕೇ ಉತ್ತರವಾಗಿದೆ’ ಎಂದಿದ್ದಾರೆ.
‘ಕನ್ನಡ ಕಾವ್ಯಗಳಲ್ಲಿ ತಾಯಿ’ ವಿಷಯವನ್ನು ಕುರಿತ ನನ್ನ ಭಾಷಣದಲ್ಲಿನ ಅಂಶಗಳನ್ನು ಗಮನಿಸದೇ, ಕೊನೆಯಲ್ಲಿ ಹಾಸ್ಯದ ದೃಷ್ಟಿಯಿಂದ ಗ್ರಾಮ್ಯ ಭಾಷೆಯಲ್ಲಿ ಹೇಳಿದ ಮಾತುಗಳ ಆಧಾರದಲ್ಲಿ ನನ್ನ ವ್ಯಕ್ತಿತ್ವವನ್ನು ನಿರ್ಣಯಿಸಿ, ತಪ್ಪಾಗಿ ಬಿಂಬಿಸುತ್ತಿರುವುದು ಬೇಸರ ತಂದಿದೆ. ಈ ಪದ ಬಳಕೆಯ ಹಿಂದೆ ದುರುದ್ದೇಶವಾಗಲೀ ಬೇರೆಯವರ ಮನಸ್ಸನ್ನೂ ನೋಯಿಸುವ ಇಂಗಿತವಾಗಲೀ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.