ಬೆಂಗಳೂರು: ‘ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-ಎಚ್ಎಸ್ಆರ್ಪಿ) ಅಳವಡಿಸದೇ ಇರುವ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ. ಮುಂದಿನ ವಿಚಾರಣೆ ವರೆಗೆ ಇದು ಅನ್ವಯವಾಗಲಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ನಿಗದಿ ಮಾಡಲಾಗಿದೆ.
‘ಎಚ್ಎಸ್ಆರ್ಪಿಯನ್ನು ನಿರ್ದಿಷ್ಟ ತಯಾರಕರು ಮಾತ್ರವೇ ಮಾರುಕಟ್ಟೆಗೆ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್ಗಳು ಮಾತ್ರ ಇವುಗಳನ್ನು ವಾಹನಗಳಿಗೆ ಅಳವಡಿಸಬೇಕು’ ಎಂಬ ಸಾರಿಗೆ ಇಲಾಖೆಯ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಲಾದ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.
ಈ ಸಂಬಂಧದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಕೆ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಪ್ರತಿವಾದಿಗಳ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಮುಂದೂಡಿತು.
ಅಂತೆಯೇ, ಎಚ್ಎಸ್ಆರ್ ಫಲಕ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ 2023ರ ಆಗಸ್ಟ್ 17ರ ಅಧಿಸೂಚನೆ ಮತ್ತು 2023ರ ಆಗಸ್ಟ್ 18ರ ಸುತ್ತೋಲೆಗೆ ತಡೆ ನೀಡಲು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿತ್ತು.
2023ರ ಸೆಪ್ಟೆಂಬರ್ 20ರಂದು ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ಸೂರತ್ನ ಬಿಎನ್ಡಿ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಇತರ ಮೂರು ಸಂಸ್ಥೆಗಳು ಈ ಮೇಲ್ಮನವಿ ಸಲ್ಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.