ADVERTISEMENT

ಪತಿಯ ಸಹಕಾರದೊಂದಿಗೆ ಸ್ವಾಮೀಜಿಯಿಂದ ಲೈಂಗಿಕ ದೌರ್ಜನ್ಯ– ದೂರು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 14:32 IST
Last Updated 8 ಸೆಪ್ಟೆಂಬರ್ 2018, 14:32 IST
ಪಾಂಡವಪುರದ ಚಕ್ರೇಶ್ವರಿ ಪೀಠದ ವಿದ್ಯಾಹಂಸಭಾರತಿ
ಪಾಂಡವಪುರದ ಚಕ್ರೇಶ್ವರಿ ಪೀಠದ ವಿದ್ಯಾಹಂಸಭಾರತಿ    

ಮೈಸೂರು: ಪತಿಯ ಸಹಕಾರದೊಂದಿಗೆ ಪಾಂಡವಪುರದ ಚಕ್ರೇಶ್ವರಿ ಪೀಠದ ವಿದ್ಯಾಹಂಸಭಾರತಿ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಕುವೆಂಪುನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪತಿ ಹಾಗೂ ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಏನಿದು ಘಟನೆ?

ಇಲ್ಲಿನ ರಾಮಕೃಷ್ಣನಗರದಲ್ಲಿ ನೆಲೆಸಿರುವ ದಂಪತಿಗೆ ಮದುವೆಯಾಗಿ 15 ವರ್ಷಗಳಾಗಿದ್ದರೂ ಸಂಸಾರದಲ್ಲಿ ಸಾಮರಸ್ಯ ಇರಲಿಲ್ಲ. ಮಕ್ಕಳೂ ಆಗಿರಲಿಲ್ಲ. ಜೆರಾಕ್ಸ್‌ ಅಂಗಡಿಯೊಂದನ್ನು ನಡೆಸುತ್ತಿದ್ದ ಪತಿ ಪಾಂಡವಪುರದ ವಿದ್ಯಾಹಂಸಭಾರತಿ ಸ್ವಾಮೀಜಿ ಅವರಿಗೆ ನಿಕಟವರ್ತಿಯಾಗಿದ್ದರು. ಪತಿಯು ಸೆ. 4ರಂದು ಚಾತುರ್ಮಸ್ಯ ಪೂಜೆಗೆಂದು ಮಧ್ಯರಾತ್ರಿ ಸ್ವಾಮೀಜಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಸ್ವಾಮೀಜಿಗೆ ಪೂಜೆಯಲ್ಲಿ ಸಹಕರಿಸಿದರೆ ಸಾಲವೆಲ್ಲ ತೀರುತ್ತದೆ ಎಂದು ಮಹಿಳೆಗೆ ಪತಿ ಪುಸಲಾಯಿಸಲು ಯತ್ನಿಸಿದ್ದಾರೆ. ಈ ಮಧ್ಯೆ ಪೂಜೆ ನೆವದಲ್ಲಿ ಸ್ವಾಮೀಜಿ ಮೈಮುಟ್ಟುವುದು ಸೇರಿದಂತೆ ಲೈಂಗಿಕವಾಗಿ ಕಿರಕುಳ ನೀಡಲಾರಂಭಿಸಿದ್ದಾರೆ. ಇದನ್ನು ಪತ್ನಿ ಪ್ರತಿಭಟಿಸಿದಾಗ ಪತಿ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ನಾನು ದೇವಿ ಸ್ವರೂಪದವನು, ನನ್ನ ಬಯಕೆಯನ್ನು ಈಡೇರಿಸಿದರೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಇಬ್ಬರೂ ಮಹಿಳೆ ಮೇಲೆ ಹಲ್ಲೆ ನಡೆಸಿ, ಮಲಗುವ ಕೋಣೆಯಲ್ಲಿನ ಹಾಸಿಗೆಗೆ ಬೆಂಕಿ ಹಚ್ಚಿದ್ದಾರೆ. ನಂತರ, ಕಾರಿನಲ್ಲಿ ಪತಿಯ ಸೋದರನ ಮನೆಗೆ ಕರೆದುಕೊಂಡು ಹೋಗುವಾಗಲೂ ತೊಡೆಯ ಮೇಲೆ ಕುಳಿತುಕೊಳ್ಳಬೇಕು ಎಂದು ಸ್ವಾಮೀಜಿ ಬಲವಂತ ಮಾಡಿದ್ದಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಮಹಿಳೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354 ಎ ಮತ್ತು ಬಿ ಪ್ರಕರಣವನ್ನು ಕುವೆಂಪುನಗರ ಪೊಲೀಸರು ದಾಖಲಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಪಕ್ಕದಲ್ಲಿ ಶಾಸಕ ಎಸ್.ಎ.ರಾಮದಾಸ್ ಹಾಗೂ ಕಾಂಗ್ರೆಸ್ ಮುಖಂಡ ವಿಜಯಶಂಕರ್ ಕುಳಿತಿರುವ ಚಿತ್ರಗಳು, ಸ್ವಾಮೀಜಿ ಕುಣಿಯುತ್ತಿರುವ ವಿಡಿಯೊ ತುಣುಕುಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.