ADVERTISEMENT

ನನ್ನ ಬಳಿ ಶಕುನಿ, ಮಂಥರೆ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 18:44 IST
Last Updated 15 ಮಾರ್ಚ್ 2021, 18:44 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ನಮ್ಮ ಪಕ್ಷದಲ್ಲಿ ಮಹಾನ್ ನಾಯಕರಿಲ್ಲ. ಈಗಲೂ ಕೆಲವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ನನ್ನ ಬಳಿ ಶಕುನಿಯೂ ಇಲ್ಲ, ಮಂಥರೆಯೂ ಇಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದ ಜೆಡಿಎಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರಿಗೆ ಏನು ದರಿದ್ರ ಬಂದಿದೆಯೋ ಗೊತ್ತಿಲ್ಲ. ಈಗಲೂ ನಮ್ಮ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಮ್ಮಲ್ಲಿರೋ ದರಿದ್ರಗಳು ಹೋಗಿವೆ’ ಎಂದರು.

‘ಈ ಸರ್ಕಾರದಲ್ಲಿ ಯಾರಿಗೂ ಜವಾಬ್ದಾರಿ ಇಲ್ಲ. ಆರು ಸಚಿವರನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೆಣಗಾಡುತ್ತಿದ್ದಾರೆ. ಬಿಜೆಪಿಯವರೇ ಅವರಿಗೆ ಒತ್ತಡ ಸೃಷ್ಟಿಸುತ್ತಿದ್ದಾರೆ. ನಾನೂ ಮತ್ತಷ್ಟು ಟೆನ್ಷನ್‌ ಕೊಡುವುದು ಬೇಡ ಎಂದು ಸದನಕ್ಕೆ ಹೋಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಈಗ ಸಿ.ಡಿ ತಯಾರಿಸೋ ನಿಪುಣರು ಇದ್ದಾರೆ. ಅಸಲಿ, ನಕಲಿ ಎಲ್ಲವನ್ನೂ ಮಾಡುತ್ತಾರೆ. ನನ್ನ ವಿರುದ್ಧವೂ ₹ 150 ಕೋಟಿ ಹಗರಣದ ಸಿ.ಡಿ ಮಾಡಿದ್ದರು. ನಾಲ್ಕು ಪ್ರಕರಣಗಳನ್ನೂ ದಾಖಲಿಸಿ ತೊಂದರೆ ಕೊಟ್ಟಿದ್ದರು’ ಎಂದರು.

ಮೈಮುಲ್‌ ಚುನಾವಣೆ ವಿಚಾರದಲ್ಲಿ ತಾವು ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ಜೆಡಿಎಸ್‌ ಕಾರ್ಯಕರ್ತರ ಪರ ಕೆಲಸ ಮಾಡಲಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ‘ಕುಮಾರಸ್ವಾಮಿ ಬಳಿ ಕೆಲವು ಗ್ರಹಗಳು ಸೇರಿಕೊಂಡಿದ್ದವು. ಈಗ ಅವೆಲ್ಲವೂ ಹೋಗಿ ಡಿ.ಕೆ. ಶಿವಕುಮಾರ್‌ ಬಳಿ ಸೇರಿಕೊಳ್ಳುತ್ತಿವೆ. ಗ್ರಹಗಳೆಲ್ಲ ಬಿಟ್ಟು ಹೋಗಿ ಪಕ್ಷಕ್ಕೆ ಒಳ್ಳೆಯದಾಗಲಿದೆ. ಇದರಿಂದ ಜೆಡಿಎಸ್‌ಗೆ ಯಾವ ತೊಂದರೆಯೂ ಆಗುವುದಿಲ್ಲ. ಕುಮಾರಸ್ವಾಮಿ ಅನುಭವಿಸಿದ್ದನ್ನು ಡಿ.ಕೆ. ಶಿವಕುಮಾರ್‌ ಅವರೂ ಸ್ವಲ್ಪ ಅನುಭವಿಸಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.