ಬೆಳಗಾವಿ: ‘ಬಿಜೆಪಿಯವರಿಗೆ ಅಧಿಕಾರ ಹಿಡಿಯಬೇಕೆಂಬ ಭ್ರಮೆ ಇದೆ. ಯಾವ ಹೋಮ– ಹವನ ಮಾಡಿದರೂ ಏನೂ ಆಗಲ್ಲ. ಯಡಿಯೂರಪ್ಪ ಅವರ ಗರುಡ ಹೋಮ ಠುಸ್ ಆಗುತ್ತದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರಕ್ಕೆ ಏನೂ ತೊಂದರೆಯಾಗಲ್ಲ. ನಾನಂತೂ ಯಾವುದೇ ಹೋಮ ಮಾಡುವುದಿಲ್ಲ. ನಾನು ಶಿವನ ಭಕ್ತ’ ಎಂದರು.
‘ಗಾಬರಿ ಆಗುವಂತಹ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ. ನಮ್ಮ ಸರ್ಕಾರಕ್ಕೆ ಯಾವುದೇ ಭಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ. ಇದೇ 8ರಂದು ಅವರು ರೈತರ ಪರ ಬಜೆಟ್ ಮಂಡಿಸುತ್ತಾರೆ’ ಎಂದು ಹೇಳಿದರು.
ಬೆಳ್ಳಂಬೆಳಿಗ್ಗೆ ಅವರ ಹೆಸರೇಕೆ ತೆಗೆಯುತ್ತೀರಿ?: ಶಾಸಕ ಎ.ಮಂಜು ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೆಳಿಗ್ಗೆ ಬೆಳಿಗ್ಗೆ ಅವರ ಹೆಸರೇಕೆ ತೆಗೆಯುತ್ತೀರಿ. ನಿಮ್ಮ (ಸುದ್ದಿಗಾರರು) ಬಾಯಲ್ಲಿ ಅಂಥವರ ಹೆಸರು ಬರಬಾರದು. ಕಳೆದ ಹತ್ತು ವರ್ಷಗಳಲ್ಲಿ, ಹಾಸನ ಜಿಲ್ಲೆ ತುಂಬಾ ತೊಂದರೆ ಅನುಭವಿಸಿದೆ. ಕುಡಿಯುವ ನೀರಿಗಾಗಿ ಭಿಕ್ಷುಕರ ರೀತಿಯಲ್ಲಿ ಕೇಳುವಂತಹ ಪರಿಸ್ಥಿತಿ ಇತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬ್ರದರ್: ಕಾಂಗ್ರೆಸ್ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ‘ಅವರು ನಮ್ಮ ಬ್ರದರ್ ಇದ್ದ ಹಾಗೆ. ಕುಮಾರಸ್ವಾಮಿ ಹಾಗೂ ನನ್ನ ಜೊತೆ ಒಳ್ಳೆ ಸಂಬಂಧವಿದೆ. ಎಲ್ಲವನ್ನೂ ಸರಿಪಡಿಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.