ಬೆಂಗಳೂರು: ಬೇರೆಯವರು ತಾಳಿ ಕಟ್ಟಿ ಮದುವೆಯಾದ ಹೆಣ್ಣನ್ನು ಅಪಹರಿಸಲು ಯತ್ನಿಸಿದಂತೆ ಬಿಜೆಪಿ ನಾಯಕರು ಸರ್ಕಾರ ರಚಿಸುವ ಕಸರತ್ತು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಹುಡುಗಿಗೆ ತಾಳಿ ಕಟ್ಟಿ ಬೇರೆಯವರು (ಎಚ್.ಡಿ.ಕುಮಾರಸ್ವಾಮಿ) ಕರೆದುಕೊಂಡು ಹೋಗಿದ್ದಾರೆ. ಅದೇ ಹುಡುಗಿ ಬೇಕೆಂದು ಬಿಜೆಪಿಯವರು ಕೇಳುವುದು ಸರಿಯಲ್ಲ. ಇದು ಒಳ್ಳೆಯ ಸಂಪ್ರದಾಯವೂ ಅಲ್ಲ. ಸರ್ಕಾರ ರಚನೆ ಕುರಿತು ಬಿಜೆಪಿಯವರು ಮಹದಾಸೆ ಇಟ್ಟುಕೊಂಡಿರುವುದರಲ್ಲಿ ತಪ್ಪೇನಿಲ್ಲ. ಆದರೆ, ಮದುವೆಯಾಗುವವರೆಗೂ ವಧುವಿನ ಹುಡುಕಾಟ ನಡೆಸಬೇಕು’ ಎಂದು ಹೇಳಿದರು.
‘ಒಂದಿಬ್ಬರು ಶಾಸಕರು ರಾಜೀನಾಮೆ ನೀಡಿದರೆ ಏನೂ ಆಗುವುದಿಲ್ಲ. ಕನಿಷ್ಠ 18 ಶಾಸಕರು ರಾಜೀನಾಮೆ ಕೊಡಬೇಕು. ಬಿಜೆಪಿಯವರು ನಮ್ಮ ಶಾಸಕರ ಸೆಳೆಯಲು ಯತ್ನಿಸಿದರೆ, ಬೇರೆಯವರು ಅವರ ಶಾಸಕರನ್ನು ಸೆಳೆಯುತ್ತಾರೆ. ಬಿಜೆಪಿಯವರು ಬೇಲಿ ಹಾರುವ ಮುನ್ನ ತಮ್ಮ ಕಾಂಪೌಂಡ್ ಸರಿಪಡಿಸಿಕೊಳ್ಳಲಿ’ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.