ADVERTISEMENT

ಐಎಫ್ಎಸ್‌: ರಾಜ್ಯದ 10 ಅಭ್ಯರ್ಥಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 23:44 IST
Last Updated 1 ಜುಲೈ 2023, 23:44 IST
   

ಬೆಂಗಳೂರು: ಭಾರತೀಯ ಅರಣ್ಯ ಸೇವೆ ಪರೀಕ್ಷೆಯ 2022ನೇ ಸಾಲಿನ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕರ್ನಾಟಕದ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ ಕಳೆದ ನವೆಂಬರ್‌ನಲ್ಲಿ 150 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿತ್ತು. ಜೂನ್‌ನಲ್ಲಿ ಸಂದರ್ಶನಗಳು ಪೂರ್ಣಗೊಂಡಿದ್ದವು. ದೇಶದ ವಿವಿಧ ರಾಜ್ಯಗಳ 147 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದ 39, ಆರ್ಥಿಕ ದುರ್ಬಲವರ್ಗದ 21, ಹಿಂದುಳಿದ ವರ್ಗಗಳ 54, ಪರಿಶಿಷ್ಟ ಜಾತಿಯ 22 ಹಾಗೂ ಪರಿಶಿಷ್ಟ ಪಂಗಡದ 11 ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ. 

ರಾಜ್ಯದ ವೀರಜ್‌ ಹೊಸೂರು 9ನೇ ರ್‍ಯಾಂಕ್‌, ಸುಚೇತ್‌ ಬಾಳ್ಕಲ್‌ 30ನೇ ರ್‍ಯಾಂಕ್‌, ಎಂ. ಪೂಜಾ 45ನೇ ರ್‍ಯಾಂಕ್‌ ಪಡೆದಿದ್ದಾರೆ.

ADVERTISEMENT

‘ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಪ್ಪ ರಾಮಕೃಷ್ಣಭಟ್‌, ಅಮ್ಮ ಶ್ರೀಮತಿ ಅವರು ಚೇತನಾ ಮುದ್ರಣಾಲಯ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಆರ್‌.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿದ ನಂತರ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದೆ. ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ದೇಶದ ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆಯ ಹೊಣೆ ನಿಭಾಯಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ‘ ಎಂದು ಸುಚೇತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.