ಧಾರವಾಡ: ರಾಜ್ಯದ ಮೊದಲ ಐಐಟಿಗಾಗಿ ಇಲ್ಲಿನ ಚಿಕ್ಕಮಲ್ಲಿಗವಾಡ ಬಳಿ ನಿರ್ಮಿಸಲಾಗಿರುವ ನೂತನ ಕ್ಯಾಂಪಸ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಚಾಲನೆ ನೀಡಲಿದ್ದಾರೆ.
ಈ ಐತಿಹಾಸಿಕ ಸಮಾರಂಭಕ್ಕಾಗಿ ಶಿಕ್ಷಣಕಾಶಿ ನವವದುವಿನಂತೆ ಸಿಂಗಾರಗೊಂಡಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಯೋಜನೆಗೊಂಡಿರುವ ಕಾರ್ಯಕ್ರಮಕ್ಕಾಗಿ ಮುಖ್ಯ ರಸ್ತೆಗಳು ಕೇಸರಿಮಯವಾಗಿವೆ.
65 ಎಕರೆ ಮೀಸಲು ಅರಣ್ಯ ಸಹಿತ ಒಟ್ಟು 535 ಎಕರೆ ಪ್ರದೇಶದಲ್ಲಿ ಐಐಟಿ ಧಾರವಾಡದ ಮೊದಲ ಹಂತದ 18 ಕಟ್ಟಡಗಳು ₹852 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡಿವೆ. ಮುಖ್ಯ ಕಟ್ಟಡವು ಚಾಲುಕ್ಯ ಮತ್ತು ವಿಜಯನಗರ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ವಿಶೇಷ. ಜತೆಗೆ ಇಂಧನ ಕ್ಷಮತೆ, ಮಳೆನೀರು ಸದ್ಬಳಕೆ ಹಾಗೂ ತಾಜ್ಯದ ಮರುಬಳಕೆಯಂತ ಪರಿಸರ ಸ್ನೇಹಿ ವಿನ್ಯಾಸಕ್ಕಾಗಿ ನೂತನ ಕ್ಯಾಂಪಸ್ ಪಂಚತಾರಾ ಶ್ರೇಣಿಯನ್ನೂ ಪಡೆದಿದೆ.
ಹೊಸ ಕ್ಯಾಂಪಸ್ ನಿರ್ಮಾಣದ ಜತೆಗೆ ನರೇಂದ್ರ ಮೋದಿ ಅವರು ರೈಲ್ವೆ ಇಲಾಖೆಯ ಹಲವು ಯೋಜನೆಗಳಿಗೆ ಇದೇ ವೇದಿಕೆಯಲ್ಲಿ ಚಾಲನೆ ನೀಡಲಿದ್ದಾರೆ.
ಸಂಜೆ 4ಕ್ಕೆ ಕಾರ್ಯಕ್ರಮ ವೇದಿಕೆಗೆ ಆಗಮಿಸುವ ಪ್ರಧಾನಿ ಮೋದಿ, ಐಐಟಿ ಧಾರವಾಡದ ಕ್ಯಾಂಪಸ್, ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್ಫಾರ್ಮ್, ಹುಬ್ಬಳ್ಳಿ–ದಾದರ್ ಮತ್ತು ಬೆಳಗಾವಿ–ಸಿಕಂದರಾಬಾದ್ ಹೊಸ ರೈಲುಗಳಿಗೆ ಚಾಲನೆ, ಹೊಸಪೇಟೆ- ಹುಬ್ಬಳ್ಳಿ- ತಿನೈಘಾಟ ನಡುವಿನ ವಿದ್ಯುತ್ ರೈಲು ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಕಟ್ಟಡಕ್ಕೆ ಶಂಕುಸ್ಥಾಪನೆ, ತುಪ್ಪರಿ ಹಳ್ಳದ ನೆರೆನಿಯಂತ್ರಣ ಯೋಜನೆಗೆ ಚಾಲನೆ, ಸ್ಮಾರ್ಟ್ ಸಿಟಿಯ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.