ಗುವಾಹತಿ: ಇಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ಬಿ.ಟೆಕ್ ಅಭ್ಯಾಸ ಮಾಡುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಸಮೀಪದ ಹೊಸನಗರ ನಿವಾಸಿ ನಾಗಶ್ರೀ ಎಸ್.ಸಿ(18) ಗುವಾಹತಿ ಐಐಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಅಭ್ಯಾಸ ನಡೆಸಿದ್ದರು. ನಾಗಶ್ರೀ ಬರೆದಿರುವ ಡೆಟ್ ನೋಟ್ ಸಿಕ್ಕಿದ್ದು, ’ನನಗೆ ಟೀಚರ್ ಆಗುವ ಹಂಬಲವಿತ್ತು, ಎಂಜಿನಿಯರ್ ಆಗಲು ಇಚ್ಛೆ ಇರಲಿಲ್ಲ’ ಎಂದು ತನ್ನ ಕೊನೆಯ ಮಾತುಗಳನ್ನು ಪದಗಳಲ್ಲಿದಾಖಲಿಸಿರುವುದಾಗಿಪೊಲೀಸರು ಮಾಹಿತಿ ನೀಡಿದ್ದಾರೆ.
’ಪಾಲಕರು ಮತ್ತು ಕುಟುಂಬ ಸದಸ್ಯರು ಇಟ್ಟಿರುವ ನಿರೀಕ್ಷೆಯ ಮಟ್ಟದಲ್ಲಿ ನಡೆಯಲು ವಿಫಲತೆ ಹೊಂದುವುದಕ್ಕಿಂತಲೂ ನಾನು ಸಾಯುವುದೇ ಮೇಲು’ ಎಂದು ಪತ್ರದಲ್ಲಿ ಬರೆದಿರುವುದಾಗಿ ಅಮಿಂಗಾವ್ ಪೊಲೀಸ್ ವಲಯದ ಅಧಿಕಾರಿ ರಾಣಾ ಭುಯನ್ ತಿಳಿಸಿರುವುದಾಗಿ ದಿ ಹಿಂದು ವರದಿ ಮಾಡಿದೆ.
ಐಐಟಿ ಹಾಸ್ಟೆಲ್ ಕೊಠಡಿಯ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿರುವುದನ್ನು ಹೊರಗಿನಿಂದ ಕಿಟಕಿ ಮೂಲಕ ಪತ್ತೆ ಮಾಡಿದ ಸೆಕ್ಯುರಿಟಿ ಗಾರ್ಡ್ಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಬೆಳಿಗ್ಗೆ 10:30ರ ಸುಮಾರಿಗೆ ಬಾಗಿಲು ಮುರಿದು ಕೊಠಡಿ ಪ್ರವೇಶಿಸಿದ್ದಾರೆ. ಪರೀಕ್ಷೆ ನಡೆಸಿರುವ ಅಲ್ಲಿನ ವೈದ್ಯರು ನಾಗಶ್ರೀ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
’ಆರೋಗ್ಯ ಸರಿಯಿಲ್ಲದ ಕಾರಣ ತರಗತಿಗೆ ಬರುವುದಿಲ್ಲ ಎಂದು ನಾಗಶ್ರೀ ತನ್ನ ಸಹಪಾಠಿಗೆ ತಿಳಿಸಿದ್ದಾಳೆ. ಆಕೆ ಮೊದಲ ಅವಧಿಯ ಕ್ಲಾಸ್ ಬಳಿಕ ಹಾಸ್ಟೆಲ್ಗೆ ಬಂದಿದ್ದಾಳೆ. ಆದರೆ, ನಾಗಶ್ರೀ ಒಳಗಿನಿಂದ ಬಾಗಿಲು ಹಾಕಿಕೊಂಡಿರುವುದು ತಿಳಿದು ಬಂದಿದೆ. ಕೂಡಲೇ ಸೆಕ್ಯುರಿಟಿ ಗಾರ್ಡ್ಗಳಿಗೆ ವಿಷಯ ಮುಟ್ಟಿಸಿದ್ದಾಳೆ’ ಎಂದು ಗುವಾಹತಿ ಐಐಟಿಯ ವಕ್ತಾರ ತಿಳಿಸಿದ್ದಾರೆ.
ನಾಗಶ್ರೀ ಮೃತ ದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೊಸನಗರದಲ್ಲಿರುವ ಆಕೆಯ ಪಾಲಕರಿಗೆ ವಿಷಯ ತಿಳಿಸಲಾಗಿದೆ.
ಗುವಾಹತಿಯಿಂದ 20 ಕಿ.ಮೀ. ದೂರದಲ್ಲಿ ಅಮಿಂಗಾವ್ ಪ್ರದೇಶದಲ್ಲಿ ಐಐಟಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.