ಬೆಂಗಳೂರು: ‘ಕನ್ನಡದ ಉಳಿವಿನಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದಾಗಿದೆ. ರಾತ್ರಿಯಿಂದ ಬೆಳಗಿನವರೆಗೂ ಯಕ್ಷಗಾನ ನಡೆಯುತ್ತದೆ. ಹೀಗಿದ್ದರೂ ಅದರಲ್ಲಿನ ಪಾತ್ರಧಾರಿಗಳು ಒಂದೂ ಇಂಗ್ಲಿಷ್ ಪದ ಬಳಸುವುದಿಲ್ಲ. ಯಕ್ಷಗಾನವು ಹವ್ಯಕರ ಕಲೆ. ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು’ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ತಿಳಿಸಿದರು.
ಅಖಿಲ ಹವ್ಯಕ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಮತ್ತು ಪಲ್ಲವಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾವು ಭವ್ಯವಾದ ಸಂಸ್ಕೃತಿ ಹೊಂದಿದ್ದೇವೆ. ದಿವ್ಯವಾದ ಇತಿಹಾಸ ನಮಗಿದೆ. ಹೀಗಿದ್ದರೂ ಪಠ್ಯಗಳಲ್ಲಿ ಈಗಲೂ ರಾಬರ್ಟ್ ಕ್ಲೈವ್ನ ಕುರಿತು ಓದುವಂತಹ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ, ‘ಬ್ರಾಹ್ಮಣ ಸಮಾಜ ಸಂಕಷ್ಟದ ಸ್ಥಿತಿಯಲ್ಲಿದೆ. ಉಪ ಜಾತಿಗಳಲ್ಲಿನ ಭಿನ್ನಾಭಿಪ್ರಾಯ ಬದಿಗೊತ್ತಿ ನಾವೆಲ್ಲಾ ಒಗ್ಗೂಡಬೇಕು’ ಎಂದು ತಿಳಿಸಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ‘ಮಹಾಸಭೆ ಸ್ಥಾಪನೆಯಾಗಿ 79 ವರ್ಷ ಆಗಿದೆ. ಸೇನೆ, ರಾಜಕೀಯ, ಶಿಕ್ಷಣ, ಸಮಾಜ ಸೇವೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹವ್ಯಕರು ಸಾಧನೆ ಮಾಡಿದ್ದಾರೆ. ಅವರನ್ನು ಸನ್ಮಾನಿಸುವ ಮೂಲಕ ಯುವ ಸಮುದಾಯವನ್ನು ಸಾಧನೆಯತ್ತ ಪ್ರೇರೇಪಿಸುವ ಕೆಲಸವನ್ನು ಮಹಾಸಭಾ ಮಾಡುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.