ADVERTISEMENT

ಎಪಿಎಲ್‌ ಪಡಿತರ ಅಕ್ಕಿ ಮೂರು ತಿಂಗಳಿಂದ ಅಸಮರ್ಪಕ ಪೂರೈಕೆ

ಅಕ್ಕಿ ಖರೀದಿಸಲು ಆದ್ಯತೆಯೇತರ ವಲಯದ ಕುಟುಂಬಗಳ ನಿರಾಸಕ್ತಿ l ಬಿಪಿಎಲ್‌ಗೆ ಬದಲಾದ 3.5 ಲಕ್ಷ ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 21:44 IST
Last Updated 24 ಜನವರಿ 2023, 21:44 IST
   

ಬೆಂಗಳೂರು: ಸಾರ್ವಜನಿಕ ಪಡಿತರ ವ್ಯವಸ್ಥೆ ಅಡಿಯಲ್ಲಿ ಆದ್ಯತೆಯೇತರ ವಲಯದ ಕುಟುಂಬಗಳಿಗೆ (ಎಪಿಎಲ್‌) ನೀಡುವ ರಿಯಾಯಿತಿ ದರದ ಅಕ್ಕಿ ಮೂರು ತಿಂಗಳಿನಿಂದ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

ಒಬ್ಬರಿರುವ ಕುಟುಂಬಕ್ಕೆ ಒಂದು ಕೆ.ಜಿ.ಗೆ ₹15ರಂತೆ ಐದು ಕೆ.ಜಿ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳಿಗೆ ಗರಿಷ್ಠ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಅಕ್ಕಿ ಅಗತ್ಯ ಇರುವ ಕುಟುಂಬಗಳು ಪ್ರತಿ ತಿಂಗಳು ಬೇಡಿಕೆಯ ಪಟ್ಟಿ ಸಲ್ಲಿಸಬೇಕು. ಬೇಡಿಕೆ ಸಲ್ಲಿಸಿದ ವರಿಗೆ ಮಾತ್ರ ಅಕ್ಕಿ ನೀಡಲಾಗುತ್ತದೆ. ರಾಜ್ಯದಲ್ಲಿ ಅಕ್ಕಿಗಾಗಿ ಬೇಡಿಕೆ ಸಲ್ಲಿಸುವ ಎಪಿಎಲ್‌ ಕುಟುಂಬಗಳ ಸಂಖ್ಯೆ ಕಳೆದ ಆರು ತಿಂಗಳಿನಿಂದ ಶೇ 20 ದಾಟಿಲ್ಲ.

‘ಕೆಲವು ಜಿಲ್ಲೆಗಳಲ್ಲಿ ಎಪಿಎಲ್‌ ಕುಟುಂಬಗಳಿಂದ ಪಡಿತರ ಅಕ್ಕಿ ಪಡೆ ಯಲು ಬೇಡಿಕೆ ಬರುತ್ತಿಲ್ಲ. 3.5 ಲಕ್ಷ ಎಪಿಎಲ್‌ ಕಾರ್ಡ್‌ಗಳು ಬಿಪಿಎಲ್‌ಗೆ ಬದ ಲಾಗಿವೆ. ಹಿಂದೆ ಪೂರೈಸಿದ ಅಕ್ಕಿ ಬಳಕೆ ಯಾಗದೆ ಉಳಿದಿದ್ದು, ಸರ್ಕಾರ ಹೊಸ ದಾಗಿ ಅಕ್ಕಿ ವಿತರಣೆ ಮಾಡಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಎಪಿಎಲ್‌ ಕುಟುಂಬಗಳಿಗೆ ಮೀಸಲಾದ ಅಕ್ಕಿಯನ್ನು ಸರ್ಕಾರದ ಇತರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ಬೇಡಿಕೆ ಇರುವ ಕೆಲವು ಜಿಲ್ಲೆಗಳಲ್ಲೂ ವ್ಯತ್ಯಯವಾಗಿದೆ’ ಎನ್ನುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು.

ADVERTISEMENT

ನ್ಯಾಯಬೆಲೆ ಅಂಗಡಿಗಳಿಂದಲೂ ನಿರುತ್ಸಾಹ: ‘ಎಪಿಎಲ್‌ ಕುಟುಂಬಗಳಿಗೆ ಪಡಿತರ ವಿತರಿಸಲು ನ್ಯಾಯಬೆಲೆ ಅಂಗಡಿ
ಗಳೂ ಉತ್ಸಾಹ ತೋರುತ್ತಿಲ್ಲ. ಖರೀದಿ ಸಿದ ಅಕ್ಕಿ ಎಷ್ಟೋ ಬಾರಿ ಖರ್ಚಾಗದೇ ಉಳಿಯುತ್ತಿದೆ. ಅತ್ಯಂತ ಕಡಿಮೆ ಬೇಡಿಕೆ, ಪ್ರತಿ ತಿಂಗಳು 10 ಸಾವಿರ ಟನ್‌ ಸಹ ಖರ್ಚಾಗುವುದಿಲ್ಲ. ಮುಂಗಡ ವಾಗಿ ಅಧಿಕ ಹಣ ನೀಡಿ ಅಕ್ಕಿ ಖರೀದಿಸಬೇಕಿರುವ ಕಾರಣದಿಂದಲೂ ಹಿಂದೇಟು
ಹಾಕುತ್ತಾರೆ’ ಎನ್ನುತ್ತಾರೆ ರಾಜ್ಯ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ.

‘ಆದ್ಯತಾ ವಲಯದ ಕುಟುಂಬಗಳಿಗೆ (ಬಿಪಿಎಲ್‌) ಕೋವಿಡ್‌ ನಂತರ ತಲಾ 5 ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಿಸಲಾಗು ತ್ತಿತ್ತು. ಹೆಚ್ಚುವರಿ ಅಕ್ಕಿಯನ್ನು ಬಹುತೇಕ ಕುಟುಂಬಗಳು ₹10ರ ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದರು. ಹೀಗಾಗಿ, ಎಪಿಎಲ್‌ ಕಾರ್ಡುದಾರರು ₹ 15 ಕೊಟ್ಟು ಖರೀದಿಸಲು ಮುಂದೆ ಬಂದಿರಲಿಲ್ಲ. ಈಗ ಕೋವಿಡ್‌ ಸಮಯದ ಹೆಚ್ಚುವರಿ ಅಕ್ಕಿ ಸ್ಥಗಿತವಾಗಿದ್ದು, ಮುಂದೆ ಬೇಡಿಕೆ ಬರ
ಬಹುದು’ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕ ರವಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.