ADVERTISEMENT

ಅಗರಬತ್ತಿ ಉದ್ಯಮದ ಹೊಸ ಅಧ್ಯಾಯ ಆರಂಭ: ಶೋಭಾ ಕರಂದ್ಲಾಜೆ

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 15:30 IST
Last Updated 6 ನವೆಂಬರ್ 2025, 15:30 IST
ಅಗರಬತ್ತಿ ತಯಾರಕರ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಎಐಎಎಂಎ ಎಕ್ಸ್‌ಪೊ–2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಅಗರಬತ್ತಿ ಹೊಸೆದ ಸಚಿವೆ ಶೋಭಾ ಕರಂದ್ಲಾಜೆ
ಅಗರಬತ್ತಿ ತಯಾರಕರ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಎಐಎಎಂಎ ಎಕ್ಸ್‌ಪೊ–2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಅಗರಬತ್ತಿ ಹೊಸೆದ ಸಚಿವೆ ಶೋಭಾ ಕರಂದ್ಲಾಜೆ   
ಮೂರು ದಿನ ನಡೆಯುವ ಸಮ್ಮೇಳನ ಸುಗಂಧ ದ್ರವ್ಯ, ಉದ್ಯಮಶೀಲತೆ ಕುರಿತು ಗೋಷ್ಠಿಗಳು | ರಫ್ತು ಕ್ಷೇತ್ರದಲ್ಲಿ ಅವಕಾಶದ ಬಗ್ಗೆ ಮಾಹಿತಿ

ಬೆಂಗಳೂರು: ‘ಭಾರತೀಯ ಅಗರಬತ್ತಿ ಉದ್ಯಮವು ನಮ್ಮ ಸಂಸ್ಕೃತಿ ಮತ್ತು ಕುಶಲಕರ್ಮಿಗಳ ಸಂಕೇತವಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಣವನ್ನು ಪರಿಚಯಿಸುವ ಮೂಲಕ ಹೊಸ ಅಧ್ಯಾಯ ಆರಂಭಗೊಂಡಿದೆ’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘ (ಎಐಎಎಂಎ) ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಎಐಎಎಂಎ ಎಕ್ಸ್‌ಪೊ–2025 ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಐಎಸ್ ಪ್ರಮಾಣೀಕರಣದ ಮೂಲಕ ನಾವು ಭಾರತೀಯ ಅಗರಬತ್ತಿ ಉತ್ಪನ್ನಗಳು ಅತ್ಯುನ್ನತ ಜಾಗತಿಕ ಗುಣಮಟ್ಟ ಹೊಂದಿರುವುದನ್ನು ಖಾತ್ರಿಪಡಿಸುತ್ತಿದ್ದೇವೆ. ಇದರಿಂದ ನಮ್ಮ ರಫ್ತು ಪ್ರಮಾಣ ಹೆಚ್ಚಲಿದೆ ಮತ್ತು ಭಾರತ ಅಗರಬತ್ತಿ ವಿಭಾಗದಲ್ಲಿ ಮುಂಚೂಣಿಯಲ್ಲಿ ನಿಲ್ಲಲು ನೆರವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಸಾಂಪ್ರದಾಯಿಕವಾಗಿ ಆಧುನಿಕ’ ಎಂಬ ವಿಷಯಯಾಧಾರಿತವಾಗಿ ಮೂರು ದಿನ ನಡೆಯಲಿರುವ ಈ ಸಮ್ಮೇಳನದಲ್ಲಿ ಬಿಐಎಸ್ ಪ್ರಮಾಣೀಕರಣವನ್ನು ಬಿಡುಗಡೆಗೊಳಿಸಲಾಯಿತು.

ಎಐಎಎಂಎ ಅಧ್ಯಕ್ಷ ಅಂಬಿಕಾ ರಾಮಾಂಜನೇಯಲು ಮಾತನಾಡಿ, ‘ಅಗರಬತ್ತಿ ತಯಾರಕರು, ಸರಬರಾಜುದಾರರು ಮತ್ತು ಪರಿಣಿತರನ್ನು ಒಂದೇ ಕಡೆ ಸೇರಿಸಿ 25 ವರ್ಷಗಳ ಪರಂಪರೆಯನ್ನು ಸಂಭ್ರಮಿಸುವ ಸಂದರ್ಭ ಇದು’ ಎಂದರು.

ಎಐಎಎಂಎ ಎಕ್ಸ್‌ಪೊ–2025ರ ಸಮಿತಿ ಅಧ್ಯಕ್ಷ ಅರ್ಜುನ್ ರಂಗಾ ಮಾತನಾಡಿ, ‘ಅಗರಬತ್ತಿ ಉದ್ಯಮವು ಸಾಂಪ್ರದಾಯಿಕ ಕಲೆಯನ್ನು ಆಧುನಿಕ ಉದ್ಯಮ ಪದ್ಧತಿಗಳ ಜೊತೆ ಸಂಯೋಜಿಸಿ ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ಈ ಎಕ್ಸ್‌ಪೊ ಸಾರುತ್ತಿದೆ’ ಎಂದು ಹೇಳಿದರು.

ಭಾರತೀಯ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯಲ್ಲಿ ಸುಗಂಧದ ಪಾತ್ರ ಕುರಿತು ತಜ್ಞ ದೇವದತ್ತ್ ಪಟ್ಟನಾಯಕ್ ಒಳನೋಟಗಳನ್ನು ಹಂಚಿಕೊಂಡರು. ಸುಗಂಧ, ಸುಸ್ಥಿರತೆ ಮತ್ತು ಉದ್ಯಮಶೀಲತೆ ಕುರಿತ ಗೋಷ್ಠಿಗಳು ನಡೆಯಲಿವೆ. ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ‘ನೋಸ್ ರಾಯಲ್’ ಪರ್ಫ್ಯೂಮ್ ಸೃಷ್ಟಿ ಸ್ಪರ್ಧೆ ನಡೆಯಲಿದೆ. ಉದ್ಯೋಗ ಸೃಷ್ಟಿ, ಕಚ್ಚಾ ವಸ್ತುಗಳ ಮೂಲ, ಹೊಸ ಸುಗಂಧಗಳ ಸಂಶೋಧನೆ, ಪ್ಯಾಕೇಜಿಂಗ್ ಅಭಿವೃದ್ಧಿ, ಮಹಿಳಾ ಸಬಲೀಕರಣ, ರಫ್ತು ಅವಕಾಶಗಳು ಮತ್ತು ಹೊಸ ಯುಗದ ಮಾರ್ಕೆಟಿಂಗ್ ಇತ್ಯಾದಿ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.