ಬೆಂಗಳೂರು:ಇನ್ಫೊಸಿಸ್ ಪ್ರತಿಷ್ಠಾನದ ₹ 1.50 ಕೋಟಿ ಮೊತ್ತದಎರಡನೇ ಆವೃತ್ತಿಯ ‘ಆರೋಹಣ ಸಾಮಾಜಿಕ ಅನ್ವೇಷಣಾ’ ಪ್ರಶಸ್ತಿಯನ್ನು ಬುಧವಾರ ಇಲ್ಲಿ ದೇಶದ 10 ಮಂದಿ ಮಹಾನ್ ಸಾಧಕರು ಮತ್ತು ಸಂಸ್ಥೆಗಳಿಗೆಪ್ರದಾನ ಮಾಡಲಾಯಿತು.
ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಕೋಲ್ಕತ್ತಾದಪಾರ್ಥ ಪ್ರತಿಮ್ ದಾಸ್ ಮಹಾಪಾತ್ರ, ಬೆಂಗಳೂರಿನಡಾ.ಬಿನಿತಾ ಎಸ್. ತುಂಗಾ ಮತ್ತು ಡಾ.ರಾಶಬೆಹರಿ ತುಂಗಾ, ಮುಂಬೈನ ತುಮಾಸ್ ಸಂಸ್ಥೆ,ಸುಸ್ಥಿರತೆ ಕ್ಷೇತ್ರದಲ್ಲಿ ಕೇರಳದ ಕೆ.ರಶೀದ್, ಎಂ.ಕೆ.ವಿಮಲ್ ಗೋವಿಂದ್ ಮತ್ತು ಎನ್.ಪಿ.ನಿಖಿಲ್.ನಿರ್ಗತಿಕರ ರಕ್ಷಣೆ ಕ್ಷೇತ್ರದಲ್ಲಿ ಚೆನ್ನೈನ ಪಿ.ಎಲ್.ರಾಮಲಿಂಗಂ ಅವರಿಗೆ ತಲಾ ₹ 20 ಲಕ್ಷ ನಗದು ಒಳಗೊಂಡ ಸ್ವರ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಬೆಂಗಳೂರಿನ ನಿತೇಶ್ ಕುಮಾರ್ ಜಾಂಗೀರ್, ರಾಜಲಕ್ಷ್ಮಿ ಬೊರ್ಥಕೂರು, ಡಾ.ಯು.ಎಸ್.ವಿಶಾಲ್ ರಾವ್, ಶಶಾಂಕ್ ಮಹೇಶ್, ನವದೆಹಲಿಯ ಅನೀಶ್ ಶರ್ಮಾ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಧ್ಯಪ್ರದೇಶದ ರೋಹಿತ್ ಪಟೇಲ್ ಅವರಿಗೆ ತಲಾ ₹ 10 ಲಕ್ಷ ನಗದು ಒಳಗೊಂಡ ರಜತ ಪ್ರಶಸ್ತಿ ನೀಡಲಾಯಿತು.
ಇನ್ನಷ್ಟು ಅನ್ವೇಷಣೆಯ ಆಶಯ: ‘ಇಂದು ಪ್ರಶಸ್ತಿ ಪಡೆದಿರುವವರು ಭವಿಷ್ಯದ ಭಾರತವನ್ನು ಮತ್ತಷ್ಟು ಉಜ್ವಲವಾಗುವಂತೆ ಮಾಡುವ ನಿಟ್ಟಿನಲ್ಲಿ ಹಗಲಿರುಳೂ ಶ್ರಮಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಪ್ರಶಸ್ತಿ ಪ್ರದಾನ ಮಾಡಿದ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.
2018ರಲ್ಲಿ ಈ ಪ್ರಶಸ್ತಿ ಆರಂಭಿಸಲಾಗಿದ್ದು, ದೇಶದಾದ್ಯಂತ ನಿರ್ಗತಿಕರಿಗೆ ಮತ್ತು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಬೆಂಬಲ ನೀಡುವಂತಹ ಆವಿಷ್ಕಾರಕ ಪರಿಹಾರಗಳನ್ನು ಸೃಷ್ಟಿ ಮಾಡುವ ವ್ಯಕ್ತಿಗಳು, ತಂಡಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಬೆಂಗಳೂರಿನವರ ಅನ್ವೇಷಣೆ
ಬೆಂಗಳೂರಿನ ಡಾ.ಬಿನಿತಾ ಎಸ್. ತುಂಗಾ ಮತ್ತು ಡಾ.ರಾಶಬೆಹರಿ ತುಂಗಾ ಅವರಿಂದ ಸೊಳ್ಳೆ ಕಡಿತದಿಂದ ಆಗುವ ರೋಗಗಳಾದ ಮಲೇರಿಯಾ, ಚಿಕುನ್ಗುನ್ಯಾ ಮತ್ತು ಡೆಂಗಿ ನಿಯಂತ್ರಿಸುವ ಸಾಧನ ಅಭಿವೃದ್ಧಿಪಡಿಸಲಾಗಿದ್ದರೆ. ನಿತೇಶ್ ಕುಮಾರ್ ಜಾಂಗೀರ್ ಅವರು ನವಜಾತ ಶಿಶುಗಳಿಗೆ ಉಸಿರಾಟ ವ್ಯವಸ್ಥೆ ಕಲ್ಪಿಸುವ ‘ಸಾನ್ಸ್’ ಕಂಡುಹಿಡಿದಿದ್ದಾರೆ. ರಾಜಲಕ್ಷ್ಮಿ ಬೊರ್ಥಕೂರು ಅವರು ‘ಟಿಜಯ್’ ಎಂಬ ಇಂಟರ್ನೆಟ್ ಆಫ್ ತಿಂಗ್ಸ್ (ಐಒಟಿ)/ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಎಂಬ ಸ್ಮಾರ್ಟ್ ಸಾಧನ ಸೃಷ್ಟಿಸಿದ್ದಾರೆ.ಡಾ.ವಿಶಾಲ್ ಯುಎಸ್ ರಾವ್ ಮತ್ತು ಶಶಾಂಕ್ ಮಹೇಶ್ ಅವರು ಗಂಟಲು ಕ್ಯಾನ್ಸರ್ನಿಂದಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡವರಿಗೆ ಕೃತಕ ಧ್ವನಿಪೆಟ್ಟಿಗೆ ಶೋಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.