ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ದಾವಣಗೆರೆ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ ಸೇವಾಲಾಲ್ ಜಯಂತ್ಯುತ್ಸವದ ವೇದಿಕೆ ಏರಲು ಅವಕಾಶ ನೀಡುವುದಿಲ್ಲ. ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದು ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ ಮುಖಂಡ ಶಿವಪ್ರಕಾಶ್ ತಿಳಿಸಿದರು.
‘ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ. 14 ಮತ್ತು 15ರಂದು ಸಂತಸೇವಾಲಾಲ್ ಜಯಂತಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಒಳಮೀಸಲಾತಿ ಪರವಾಗಿದ್ದ ಸಚಿವರು, ರಾಜಕೀಯ ನಾಯಕರನ್ನು ವೇದಿಕೆ ಏರಲು ಬಿಡುವುದಿಲ್ಲ. ಸಮುದಾಯಕ್ಕೆ ಆಗಿರುವ ಅನ್ಯಾಯ ಪ್ರತಿಭಟಿಸದಿರುವ ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೂ ಘೇರಾವ್ ಹಾಕಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಧಾರ್ಮಿಕ ವಿಧಿವಿಧಾನಗಳ ಮೂಲಕ ಜಯಂತ್ಯುತ್ಸವ ನಡೆಸಲು ಸಮುದಾಯ ನಿರ್ಧರಿಸಿದೆ. ಇಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸುವುದಕ್ಕೆ ಆಕ್ಷೇಪವಿದೆ. ರಾಜ್ಯ ಸರ್ಕಾರ ಬಂಜಾರ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ಮಾಡಿದೆ. ಸಮುದಾಯದ ಯಾರೊಬ್ಬರಿಗೂ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸದೇ ಮೋಸ ಮಾಡಿದೆ’ ಎಂದು ಸಮಿತಿ ಮುಖಂಡ ಹಾಲೆಕಲ್ ಚಂದ್ರನಾಯ್ಕ ದೂರಿದರು.
ಮುಖಂಡರಾದ ಮಂಜಾನಾಯ್ಕ, ಓಂಕಾರ ನಾಯ್ಕ, ಅರುಣ್ಕುಮಾರ್ ಹಾಜರಿದ್ದರು.
ಒಳಮೀಸಲಾತಿಗೆ ಅನುಗುಣವಾಗಿ ರೂಪಿಸಿದ ರೋಸ್ಟರ್ ಬಿಂದು ಅವೈಜ್ಞಾನಿಕವಾಗಿದೆ. ನೇಮಕಾತಿ, ಬಡ್ತಿಯಲ್ಲಿ ಸಮುದಾಯಕ್ಕೆ ಭಾರಿ ಅನ್ಯಾಯವಾಗುತ್ತಿದೆ.ಮಂಜುನಾಯ್ಕ, ಅಧ್ಯಕ್ಷ, ಕರ್ನಾಟಕ ತಾಂಡ ರಕ್ಷಣಾ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.