ಬೆಂಗಳೂರು: ‘ಒಳಮೀಸಲಾತಿ ಸಂಬಂಧ ಗಣತಿದಾರರು ಮನೆ–ಮನೆಗೆ ಬಂದಾಗ ಭೋವಿ ಜನಾಂಗದವರು ಕಡ್ಡಾಯವಾಗಿ ‘ಭೋವಿ ವಡ್ಡರ್’ ಎಂದೇ ಬರೆಸಬೇಕು’ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.
ಅಂತರರಾಷ್ಟ್ರೀಯ ಭಾರತೀಯ ಭೋವಿ (ವಡ್ಡರ) ಸಮಾಜ ನಗರದಲ್ಲಿ ಭಾನುವಾರ ಒಳಮೀಸಲಾತಿ ಕುರಿತು ಆಯೋಜಿಸಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಭೋವಿ ಜನರಲ್ಲಿ ತಮ್ಮ ಜಾತಿಯ ಬಗ್ಗೆ ಕೀಳರಿಮೆ ಇದೆ. ಹೀಗಾಗಿ ಅವರು ತಮ್ಮ ಜಾತಿಯ ಹೆಸರು ಹೇಳಿಕೊಳ್ಳುವುದಿಲ್ಲ. ಸರ್ಕಾರದ ಸವಲತ್ತುಗಳು ಸರಿಯಾಗಿ ಸಿಗಬೇಕೆಂದರೆ ಜಾತಿಯ ಹೆಸರನ್ನು ಸರಿಯಾಗಿ ಬರೆಸಬೇಕು’ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್.ತಂಗಡಗಿ, ‘ಇದು ಅತ್ಯಂತ ಮಹತ್ವದ ಕಾಲ. ಸಮುದಾಯದ ಅಕ್ಷರಸ್ತರು ಸ್ನೇಹಿತರು, ಸಂಬಂಧಿಗಳಿಗೆ ಸಮೀಕ್ಷೆ ವೇಳೆ ‘ಭೋವಿ ವಡ್ಡರ್’ ಎಂದೇ ಬರೆಸಬೇಕು ಎಂದು ತಿಳಿವಳಿಕೆ ಮೂಡಿಸಬೇಕು’ ಎಂದರು.
ಸಂಸದ ಮಲ್ಲೇಶ್ಬಾಬು, ‘ನಮ್ಮ ಜನಾಂಗದವರಿಗೆ ಸಾಮಾಜಿಕ ನ್ಯಾಯ, ಶಿಕ್ಷಣ, ಆರ್ಥಿಕ, ರಾಜಕೀಯ ಅಧಿಕಾರ ಸಿಗಲು ಸರಿಯಾಗಿ ಜಾತಿ ಹೆಸರು ಬರೆಸಬೇಕು. ಇಲ್ಲದಿದ್ದರೆ ಜನಾಂಗದ ಜನ ಕಡಿಮೆ ಇದ್ದಾರೆ ಎಂದಾಗುತ್ತದೆ. ಸವಲತ್ತು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.