ADVERTISEMENT

ವಿಶ್ವನಾಥ್‌ ಆರೋಪದಲ್ಲಿ ಹುರುಳಿಲ್ಲ, ನಿಯಮಾನುಸಾರ ಟೆಂಡರ್‌: ಜಲಸಂಪನ್ಮೂಲ ಇಲಾಖೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 10:54 IST
Last Updated 18 ಜೂನ್ 2021, 10:54 IST
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್   

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ₹4,026.60 ಕೋಟಿ ಮೊತ್ತದ 7 ಪ್ಯಾಕೇಜ್‌ಗಳಿಗೆ ಟೆಂಡರ್‌ಗಳನ್ನು ಕೆಟಿಪಿಪಿ ನಿಯಮ ಅನುಸಾರವೇ ಕೈಗೊಳ್ಳಲಾಗಿದೆ ಎಂದು ಜಲಸಂನ್ಮೂಲ ಇಲಾಖೆ ತಿಳಿಸಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ₹21,473.67 ಕೋಟಿ. ಸಮಗ್ರ ಪರಿಷ್ಕೃತ ಯೋಜನಾ ವರದಿಗೆ 2020 ರ ಡಿಸೆಂಬರ್‌ 16 ರಂದು ಆರ್ಥಿಕ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ₹16,125.4 ಕೋಟಿ ಕೇಂದ್ರ ಸರ್ಕಾರ ಪಾಲು ನೀಡುತ್ತದೆ. ಅದಕ್ಕೆ ಕೇಂದ್ರ ಜಲಶಕ್ತಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯೂ ಒಪ್ಪಿಗೆ ನೀಡಿದೆ.

ಅಲ್ಲದೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಜಲಶಕ್ತಿ ಇಲಾಖೆಯು ಕಳೆದ ಮಾರ್ಚ್‌ 25 ರಂದು ಹೂಡಿಕೆ ತೀರುವಳಿ ಮಂಡಳಿಗೆ ಸಲ್ಲಿಸಿತ್ತು. ಯೋಜನೆಯನ್ನು 2023–24 ರಲ್ಲಿ ಪೂರ್ಣಗೊಳಿಸಬೇಕು.ಇದಕ್ಕೆ ತಗಲುವ ಒಟ್ಟು ವೆಚ್ಚವನ್ನು ನಿಗಧಿತ ಅವಧಿಯಲ್ಲಿ ಭರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.

ADVERTISEMENT

ಈ ಯೋಜನೆಯನ್ನು 2023–24 ರೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಯವರು ತೀರ್ಮಾನಿಸಿದ್ದಾರೆ. ಈ ಎಲ್ಲ ಕಾಮಗಾರಿಗಳನ್ನು 2023–24 ನೇ ಸಾಲಿನಲ್ಲಿ ಪೂರ್ಣಗೊಳಿಸುವ ಅವಶ್ಯಕತೆ ಇರುವ ಕಾರಣ, ಡ್ರಿಪ್‌ ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ಡಿಟಿಪಿಗೆ ತಜ್ಞರನ್ನು ಒಳಗೊಂಡ ಡ್ರಿಪ್‌ ಸಮಿತಿಯ 5 ಸಭೆಗಳಲ್ಲಿ ಚರ್ಚಿಸಿ, ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ತೀರುವಳಿ ಪಡೆದು ಕೆಟಿಪಿಪಿ ನಿಯಮಾನುಸಾರ ₹4,026.60 ಕೋಟಿ ಮೊತ್ತದ 7 ಪ್ಯಾಕೇಜ್‌ಗಳಿಗೆ ಟೆಂಡರ್‌ ಕರೆಯಲಾಗಿದೆ.

ಕೋವಿಡ್‌ ಕಾರಣ ಕಳೆದ ವರ್ಷದ ಯೋಜನೆ ಕಾಮಗಾರಿಗೆ ಟೆಂಡರ್‌ ಕರೆಯಲು ಸಾಧ್ಯವಾಗಿರಲಿಲ್ಲ. ಈಗ ಟೆಂಡರ್‌ ಕರೆಯಲಾಗಿದೆ. ಇದಕ್ಕೆ ಸಂಪುಟದ ಒಪ್ಪಿಗೆಯೂ ಸಿಕ್ಕಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.