ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆ
ಬೆಂಗಳೂರು: ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಗೆ ನೀಡುವ ಇಂಟ್ರಾವೀನಸ್ ಇಮ್ಯುನೋಗ್ಲೋಬಿನ್ (ಐವಿಐಜಿ) ಥೆರಪಿಯನ್ನು ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿ–ಎಆರ್ಕೆ) ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ವಹಿಸುತ್ತಿದೆ. ಜಿಬಿಎಸ್ ರೋಗಕ್ಕೆ ಒಳಗಾದವರಿಗೆ ಚೇತರಿಸಿಕೊಳ್ಳಲು ಐವಿಐಜಿ ಥೆರಪಿ ಸಹಕಾರಿಯಾಗಿದೆ ಎಂದು ತಿಳಿಸಲಾಗಿದೆ.
ಜಿಬಿಎಸ್ ಎಂಬುದು ರೋಗಿಯ ಪ್ರತಿಕಾಯ ಸಾಮರ್ಥ್ಯವನ್ನು ಕುಗ್ಗಿಸುವ ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕಿನಿಂದ ಬರುವ ನರ ಸಂಬಂಧಿ ಅನಾರೋಗ್ಯವಾಗಿದೆ. ಇದು ಅಪರೂಪದ ಕಾಯಿಲೆಯಾಗಿದ್ದು, ದೇಹವು ಹಠಾತ್ತನೆ ಮರಗಟ್ಟುವಂತೆ ಮಾಡಿ, ಕೈ–ಕಾಲು ಹಾಗೂ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ರಾಜ್ಯದಲ್ಲಿ ಜಾರಿಯಿರುವ ‘ಅಂಗಾಂಗ ಕಸಿ ಯೋಜನೆ’ಯಡಿ (ಜೀವನ ಸಾರ್ಥಕತೆ) ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶ ಹಾಗೂ ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ) ಪ್ರಕ್ರಿಯೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದವರಿಗೆ ಅನ್ವಯವಾಗುವ ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ವಹಿಸುತ್ತಿದೆ. ಈ ಯೋಜನೆಯು ಯಕೃತ್ತು, ಮೂತ್ರಪಿಂಡ ಮತ್ತು ಹೃದಯ ಕಸಿಯನ್ನು ಒಳಗೊಂಡಿತ್ತು. ಈಗ ಯೋಜನೆಯನ್ನು ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.