ಧಾರವಾಡ: ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ 2019ರಲ್ಲಿ ನೇಮಕಾತಿಯಾಗಿರುವ ಜೈಲರ್ಗಳಿಗೆ ವರ್ಷ ಕಳೆದರೂ ವೇತನ ಪಾವತಿಯಾಗಿಲ್ಲ.
2019ರ ನವೆಂಬರ್ನಲ್ಲಿ ಇಲಾಖೆಯಲ್ಲಿ ಖಾಲಿ ಇದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ಹಾಗೂ ಹೈದ್ರಾಬಾದ್ ಕರ್ನಾಟಕೇತರ ಮೂಲವೃಂದಕ್ಕೆ 12 ಜೈಲರ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾದ ನೂತನ ಜೈಲರ್ಗಳು ತರಬೇತಿ ಪಡೆದು ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕರ್ತವ್ಯದಲ್ಲಿದ್ದಾರೆ.
ಸಿ–ಶ್ರೇಣಿಯ ಈ ಹುದ್ದೆಗೆ ₹37,900 ವೇತನ ನಿಗದಿಪಡಿಸಲಾಗಿತ್ತು. ಆದರೆ ವರ್ಷ ಕಳೆದರೂ ತರಬೇತಿ ಹಂತದಿಂದ ಇಲ್ಲಿಯವರೆಗೆ ಒಂದು ತಿಂಗಳ ವೇತನವೂ ಪಾವತಿಯಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲಿಚ್ಛಿಸದ ಸಿಬ್ಬಂದಿಯೊಬ್ಬರು, ‘ನಾವು ಬಡ ಕುಟುಂಬ ಹಿನ್ನೆಲೆಯವರಾಗಿದ್ದು, ನೌಕರಿ ಸಿಕ್ಕ ಖುಷಿಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆವು. ನಮ್ಮ ಕೆಲಸ ಹಾಗೂ ನಮಗೆ ಬರುವ ವೇತವನ್ನೇ ನಮ್ಮ ಕುಟುಂಬದವರು ಅವಲಂಬಿಸಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ವೇತನ ಪಾವತಿಯಾಗದೆ, ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಒಂಬತ್ತು ತಿಂಗಳ ತರಬೇತಿ ಹಂತದಲ್ಲೂ ಮೆಸ್ ಶುಲ್ಕ ಮಾಸಿಕ ₹5ಸಾವಿರವನ್ನು ಕೈಯಿಂದಲೇ ಭರಿಸಿದ್ದೇವೆ. ಈಗ ಸ್ಥಳ ನಿಯುಕ್ತಿಗೊಂಡ ನಂತರ ಬಾಡಿಗೆ ಮನೆ, ನಿತ್ಯದ ಖರ್ಚಿಗೂ ಹಣವಿಲ್ಲದಂತಾಗಿದೆ. ಆರಂಭದಲ್ಲಿ ಕೆಜಿಐಡಿ ಸಂಖ್ಯೆ ಹಾಗೂ ನಿವೃತ್ತಿ ವೇತನ ಸಂಖ್ಯೆ ಬಾರದ ಕಾರಣ ವೇತನ ಪಾವತಿಯಾಗಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈಗ ಎಲ್ಲವೂ ಇದೆ, ಆದರೆ ವೇತನ ಸಿಕ್ಕಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡರು.
‘ಕೊರೊನಾ ಕರ್ತವ್ಯವನ್ನೂ ನಾವು ನಿಭಾಯಿಸಿದ್ದೇವೆ. ಜತೆಗೆ ಒಂದಷ್ಟು ಸ್ನೇಹಿತರು ಹಾಗೂ ಸಂಬಂಧಿಗಳಿಂದ ಜೀವನ ನಿರ್ವಹಣೆಗೆ ಕೈಸಾಲ ಪಡೆದಿದ್ದೇವೆ. ಅವುಗಳನ್ನು ಮರಳಿಸಬೇಕಿದೆ. ಇಲಾಖೆ ವೇತನ ಬಿಡುಗಡೆ ಮಾಡಿದರೆ ಜೀವನ ಸಾಗಿಸಲು ಅನುಕೂಲವಾಗಲಿದೆ’ ಎಂದರು.
**
ಹೊಸ ಪಿಂಚಣಿ ವ್ಯವಸ್ಥೆ ನೋಂದಣಿಗೆ ಕೋವಿಡ್ನಿಂದ ತಡವಾಗಿತ್ತು. ಮಾರ್ಚ್ನಿಂದ ಹಿಂದಿನ ವೇತನ ಪಾವತಿಗೆ ಸರ್ಕಾರ ಅನುಮತಿ ನೀಡಬೇಕು.
-ಶಿವಕುಮಾರ್, ಸೂಪರಿಂಟೆಂಡೆಂಟ್, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.