ಬಳ್ಳಾರಿ: ಬಳ್ಳಾರಿಗೆ ತೆರಳಲು ಕನಿಷ್ಠ ಪಕ್ಷ ನಾಲ್ಕು ವಾರ ಅನುಮತಿ ಕೊಡುವಂತೆ ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸುವ ಮುನ್ನವೇ ಗಣಿ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಸೋಮವಾರ ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಕಾಣಿಸಿಕೊಂಡರು.
ತಮ್ಮ ಮಗಳು ಮಗುವಿಗೆ ಜನ್ಮನೀಡಿ ರುವುದರಿಂದ ನಾಲ್ಕು ವಾರ ಬಳ್ಳಾರಿಗೆ ಹೋಗಲು ಅನುಮತಿ ನೀಡಬೇಕು ಎಂದು ರೆಡ್ಡಿ ಸುಪ್ರೀಂ ಕೋರ್ಟ್ಗೆ ಅರ್ಜಿಸಲ್ಲಿಸಿದ್ದಾರೆ. ಈ ಕುರಿತ 10ರಂದು ಆದೇಶ ಪ್ರಕಟಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಈ ಮಧ್ಯೆ, ಜನಾರ್ದನರೆಡ್ಡಿ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಅಣ್ಣ, ಬಳ್ಳಾರಿ ನಗರದ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತಿತರ ಬೆಂಬಲಿಗರ ಜತೆಗೂಡಿ ದೇವಸ್ಥಾನಕ್ಕೆ ಧಾವಿಸಿದರು.
‘ಬಳ್ಳಾರಿಗೆ ಬರಲು ನಾನು ಕಾಲಾವಕಾಶ ಕೇಳಿಲ್ಲ. ನನ್ನ ಮೇಲೆ ಸಿಬಿಐ ಪ್ರಕರಣ ದಾಖಲಿಸಿ, 12 ವರ್ಷದಿಂದ ವಿಚಾರಣೆ ನಡೆಯದಿರಲು ಬಳ್ಳಾರಿಯಲ್ಲಿ ನಾನಿರುವುದೇ ಸಮಸ್ಯೆ ಎಂದು ಅಧಿಕಾರಿಗಳು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ. ದಿನನಿತ್ಯ ವಿಚಾರಣೆ ನಡೆಸಬೇಕೆಂದು ಅರ್ಜಿ ಹಾಕಿದ್ದೇನೆ. ಮೂರ್ನಾಲ್ಕು ತಿಂಗಳಲ್ಲಿ ಇತ್ಯರ್ಥವಾಗಲಿ ಎಂಬ ಉದ್ದೇಶ ನನ್ನದು’ ಎಂದು ರೆಡ್ಡಿ ಉತ್ತರಿಸಿದರು.
‘ಪ್ರಕರಣದಲ್ಲಿ ಸೋಲಾಗಬಹು ದೆಂಬ ಭಯದಿಂದ ವಿಚಾರಣೆ ತ್ವರಿತಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ನ್ಯಾಯ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆಸುಪ್ರೀಂ ಕೋರ್ಟ್ ಅನುಮತಿಸಿದೆ. 14 ತಿಂಗಳಿಂದ ಬಳ್ಳಾರಿಯಲ್ಲೇ ಇದ್ದೇನೆ. ಮಗಳಿಗೆ ಹೆರಿಗೆಯಾಗಿರುವ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ತೊಂದರೆ ಮಾಡಬಹುದೆಂದು, ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ವಕೀಲರು ವಾದ ಮಾಡಿ ದ್ದಾರೆ’ ಎಂದು ಜನಾರ್ದನರೆಡ್ಡಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.