ಬೆಂಗಳೂರು: ಪ್ರಸಕ್ತ ಸಾಲಿನ ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಭಾನುವಾರ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್-ಯುಜಿ) ಕಲಬುರಗಿ ನಗರದ ಸೇಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯೊಬ್ಬರ ಜನಿವಾರವನ್ನು ತೆಗೆಯಿಸಿ ಅನುಮತಿ ನೀಡಲಾಗಿದೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ (ಸಿಇಟಿ) ವಿದ್ಯಾರ್ಥಿಯೊಬ್ಬರ ಜನಿವಾರ ತೆಗೆಯಲು ಸೂಚಿಸಿದ ಮತ್ತು ರೈಲ್ವೆ ಮಂಡಳಿಯ ಪರೀಕ್ಷೆಯಲ್ಲಿ ಜನಿವಾರ ಧರಿಸಿ ಬರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಈ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಬೆಟಬೆಲಕುಂದಾ ಗ್ರಾಮದ, ನಗರದ ಖಾಸಗಿ ಕಾಲೇಜಿನ ಶ್ರೀಪಾದ ಪಾಟೀಲ ಜನಿವಾರ ಕಳಚಿ ಪರೀಕ್ಷೆ ಬರೆದ ವಿದ್ಯಾರ್ಥಿ.
‘ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೆ ನಿಯೋಜನೆಗೊಂಡಿದ್ದ ಶರಣು ಎಂಬುವವರು ಜನಿವಾರ ತೆಗೆಯುವಂತೆ ತಾಕೀತು ಮಾಡಿದರು. ಇನ್ನೊಬ್ಬರಿಗೆ ಕೇಳಿದರೂ ಜನಿವಾರ ತೆಗೆಯಲೇಬೇಕು, ಇಲ್ಲದಿದ್ದರೆ ಪರೀಕ್ಷೆಗೆ ಅನುಮತಿಸುವುದಿಲ್ಲ ಎಂದರು’ ಎಂದು ಮಾಧ್ಯಮಗಳಿಗೆ ಶ್ರೀಪಾದ ಹೇಳಿದರು.
‘ಜನಿವಾರ ತೆಗೆದು ಹೊರಗಡೆ ನಿಂತಿದ್ದ ತಂದೆಯ ಕೈಗೆ ಕೊಟ್ಟೆ. ಮೆಡಿಕಲ್ ಓದುವ ಆಸೆಯಿಂದ ಬಂದಿದ್ದು, ಒತ್ತಡದಲ್ಲಿ ಸರಿಯಾಗಿ ಪರೀಕ್ಷೆ ಬರೆಯಲು ಆಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರದ ಮುಂದೆ ಜನಿವಾರ ಧಾರಣೆ: ರಾಜ್ಯ ಸರ್ಕಾರ, ಪರೀಕ್ಷಾ ಕೇಂದ್ರ ಹಾಗೂ ಜನಿವಾರ ತೆಗೆಸಿದವರ ವಿರುದ್ಧ ಘೋಷಣೆ ಕೂಗಿ ಬ್ರಾಹ್ಮಣ ಸಮುದಾಯ ಹಾಗೂ ಎಬಿವಿಪಿ ಮುಖಂಡರು ಪ್ರತಿಭಟನೆ ನಡೆಸಿದರು. ಪರೀಕ್ಷಾ ಕೇಂದ್ರದ ಆವರಣಕ್ಕೆ ನುಗ್ಗಿದವರನ್ನು ಪೊಲೀಸರು ಹೊರಕ್ಕೆ ಕಳುಹಿಸಿದ್ದರು.
ಎಸ್.ಬಿ. ಟೆಂಪಲ್ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜನಿವಾರ ಕಳಚಿಸಿದವರನ್ನು ಅರೆಬೆತ್ತಲೆ ಮಾಡಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಪರೀಕ್ಷೆ ಮುಗಿಸಿ ಹೊರಬಂದ ಶ್ರೀಪಾದಗೆ ಶಾಲೆಯ ಮುಂಭಾಗದ ನಡು ರಸ್ತೆಯಲ್ಲಿ ಆಚಾರ್ಯರು ಮಂತ್ರಘೋಷಗಳೊಂದಿಗೆ ಜನಿವಾರ ಧಾರಣೆ ಮಾಡಿದರು.
ಬಹುತೇಕ ಕಡೆ ಸುಗಮ: ಹುಬ್ಬಳ್ಳಿ– ಧಾರವಾಡ ಅವಳಿ ನಗರದ 22 ಕೇಂದ್ರಗಳಲ್ಲಿ ನೀಟ್ ಸುಗಮವಾಗಿ ನಡೆಯಿತು. ಧಾರವಾಡ ನಗರದ 11 ಕೇಂದ್ರಗಳಲ್ಲಿ 4,200 ವಿದ್ಯಾರ್ಥಿಗಳು ಹಾಗೂ ಹುಬ್ಬಳ್ಳಿಯ 11 ಕೇಂದ್ರಗಳಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ 21 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9,065 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. 289 ಅಭ್ಯರ್ಥಿಗಳು ಗೈರಾದರು. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಸಮಸ್ಯೆ ಕಾಣಿಸಿಕೊಂಡಿತ್ತಾದರೂ ತಕ್ಷಣವೇ ಸರಿಪಡಿಸಲಾಯಿತು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಗೊಂದಲಗಳಿಲ್ಲದೆ ಪರೀಕ್ಷೆ ನಡೆದಿದೆ.
ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿಯೂ ನೀಟ್ ಸುಗಮವಾಗಿ ನಡೆಯಿತು. ದಾವಣಗೆರೆಯ ಮೋತಿ ವೀರಪ್ಪ ಕಾಲೇಜು ಆವರಣಕ್ಕೆ ಮೊಬೈಲ್ ಫೋನ್ನೊಂದಿಗೆ ಬಂದಿದ್ದ ವಿದ್ಯಾರ್ಥಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 96 ವಿದ್ಯಾರ್ಥಿಗಳು ಹಾಗೂ ತುಮಕೂರು ಜಿಲ್ಲೆಯ ಹತ್ತು ಪರೀಕ್ಷಾ ಕೇಂದ್ರಗಳಲ್ಲಿ 223 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ರಾಜ್ಯದ ಒಟ್ಟು 381 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆಯಿತು. 1.49 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.