ADVERTISEMENT

ವಚನಗಳೇ ನಿಜವಾದ ಧರ್ಮಗ್ರಂಥಗಳು

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:30 IST
Last Updated 19 ಮೇ 2019, 11:30 IST
ಎಸ್.ಜಿ.ಸಿದ್ಧರಾಮಯ್ಯ ಹಾಗೂ ಕನ್ನಡ ಸಂಘದ ಸಂಚಾಲಕ ಕೋ.ವೆಂ.ರಾಮಕೃಷ್ಣೇಗೌಡ ಚರ್ಚಿಸಿದರು. ಪ್ರಾಂಶುಪಾಲ ಗೋವಿಂದ ಶೆಟ್ಟಿ, ಸಿ.ಸೋಮಶೇಖರ್ ಇದ್ದರು. –ಪ್ರಜಾವಾಣಿ ಚಿತ್ರ
ಎಸ್.ಜಿ.ಸಿದ್ಧರಾಮಯ್ಯ ಹಾಗೂ ಕನ್ನಡ ಸಂಘದ ಸಂಚಾಲಕ ಕೋ.ವೆಂ.ರಾಮಕೃಷ್ಣೇಗೌಡ ಚರ್ಚಿಸಿದರು. ಪ್ರಾಂಶುಪಾಲ ಗೋವಿಂದ ಶೆಟ್ಟಿ, ಸಿ.ಸೋಮಶೇಖರ್ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ದೇಶವನ್ನು ಆಕ್ರಮಣಕಾರರಿಂದ ಬಿಡಿಸಿಕೊಂಡಿದ್ದೇವೆ. ಆದರೆ, ಜಾತಿ ವ್ಯವಸ್ಥೆಯ ಹಿಡಿತದಿಂದ ಮುಕ್ತ ಮಾಡಲು ಆಗಿಲ್ಲ’ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ಹೇಳಿದರು.

ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ, ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನ ಹಾಗೂ ಬಸವ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಚನ ಸಾಹಿತ್ಯದ ಬಹುತ್ವದ ನೆಲೆಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಚಾತುವರ್ಣ ವ್ಯವಸ್ಥೆ ತರತಮವನ್ನು ಹುಟ್ಟು ಹಾಕಿತು. ಸಂಪನ್ಮೂಲಗಳ ಅಸಮಾನ ಹಂಚಿಕೆ ಮಾಡಿತು. ಮನುಷ್ಯರನ್ನು ಶ್ರೇಷ್ಠ–ಕನಿಷ್ಠವೆಂದು ವಿಭಜನೆ ಮಾಡಿತು. ಸಮಾನತೆಯ ತತ್ವವನ್ನು ಬುದ್ಧ, ಮಹಾವೀರ, ಗುರುನಾನಕ್‌, ಸಿದ್ಧರು, ನಾಥರು ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಆಶಯಗಳು ಇನ್ನೂ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ವಚನಗಳೇ ನಿಜವಾದ ಧರ್ಮಗ್ರಂಥಗಳು. ಅವು ಬಹುತ್ವದ ನೆಲೆಯನ್ನು ಪ್ರತಿನಿಧಿಸುತ್ತವೆ. ಶರಣ ಚಳವಳಿಯ ಉಪ ಉತ್ಪನ್ನವೇ ವಚನ ಸಾಹಿತ್ಯ. ಅದು ಸೈದ್ಧಾಂತಿಕ ಸಾಹಿತ್ಯವಲ್ಲ, ಕಾಯಕ ಚರಿತ ಸಾಹಿತ್ಯ’ ಎಂದರು.

‘ಇಂದಿನ ವಿದ್ಯಾರ್ಥಿಗಳಿಗೆ ತಿರುಚಿದ, ತಪ್ಪು ಕಲ್ಪನೆಗಳ ಚರಿತ್ರೆಯನ್ನು ಹೇಳಿಕೊಡಲಾಗುತ್ತಿದೆ. ಅವರಿಗೆ ಕಾಯಕ ಪರಿಭಾಷೆಯ ವಚನಗಳಿಂದ ವಿವೇಕ ತುಂಬಬೇಕಿದೆ’ ಎಂದರು.

ಬಸವ ವೇದಿಕೆಯ ಅಧ್ಯಕ್ಷ ಸಿ.ಸೋಮಶೇಖರ್‌,‘ಬಹುತ್ವದ ನೆಲೆಯಲ್ಲಿ ರೂಪಿತವಾದ ವಚನಗಳು ಹಲವಾರು ಜನರಿಗೆ ಪ್ರೇರಣೆ ಆಗಿವೆ. ಸಾಮಾಜಿತ ತತ್ವ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದೆ. ವಚನಗಳ ಗುಚ್ಛವು ನಮ್ಮ ನಾಡು ವಿಶ್ವಕ್ಕೆ ಕೊಟ್ಟ ಮೊದಲ ಸಂವಿಧಾನವಾಗಿದೆ’ ಎಂದರು.

*

ಮನುಶಾಸ್ತ್ರದಿಂದ ಮೇಲ್ವರ್ಗಗಳು ಆಳಿದವು. ಇಂದು ಸಹ ಆ ವೈದಿಕಶಾಸ್ತ್ರದವರೇ ನಮ್ಮನ್ನು ಆಳುತ್ತಿದ್ದಾರೆ. ಸಂವಿಧಾನ ಬದಲಾವಣೆಯ ಮಾತನಾಡುತ್ತಿದ್ದಾರೆ.

– ಎಸ್‌.ಜಿ.ಸಿದ್ಧರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.