ADVERTISEMENT

ಜೆಡಿಎಸ್‌ಗೆ ಆರು ಕ್ಷೇತ್ರ ನೀಡಲು ಕಾಂಗ್ರೆಸ್‌ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:30 IST
Last Updated 13 ಫೆಬ್ರುವರಿ 2019, 20:30 IST
   

ನವದೆಹಲಿ: ಜೆಡಿಎಸ್‌ ಜೊತೆಗಿನ ಮೈತ್ರಿಯೊಂದಿಗೇ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿರುವ ಕಾಂಗ್ರೆಸ್‌, ರಾಜ್ಯದಲ್ಲಿ ಆರು ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಮುಂದಾಗಿದೆ.

ಮಂಡ್ಯ ಮತ್ತು ಹಾಸನಗಳಲ್ಲಿ ಜೆಡಿಎಸ್‌ನ ಹಾಲಿ ಸಂಸದರಿದ್ದಾರೆ. ಅಂಬರೀಷ್‌ ಪತ್ನಿ ಸುಮಲತಾ ಅವರು ಒಂದೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಸಕ್ತಿ ತೋರಿದರೆ, ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲೇಬೇಕು ಎಂಬ ಸಲಹೆಯನ್ನು ರಾಜ್ಯ ಮುಖಂಡರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸುಮಲತಾ ಅವರಿಗೆ ಟಿಕೆಟ್‌ ನಿರಾಕರಿಸಿದಲ್ಲಿ, ಪಕ್ಷವು ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅವರಿಗೇ ಟಿಕೆಟ್‌ ನೀಡಿದಲ್ಲಿ ದೂರವಾಗುತ್ತಿರುವ ಪ್ರಾಬಲ್ಯ ಮರುಸ್ಥಾಪನೆಗೆ ನೆರವಾಗುತ್ತದೆ ಎಂದು ಕೆಲವು ಮುಖಂಡರು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ.

ADVERTISEMENT

‘ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿರುವ ಪಕ್ಷದ ರಾಜ್ಯ ಮುಖಂಡರು, ಬೀದರ್‌ನಿಂದ ಹಾವೇರಿವರೆಗೆ ಉತ್ತರ ಕರ್ನಾಟಕದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಿತ್ರ ಪಕ್ಷವನ್ನು ಕೋರಬಹುದು. ಜಗ್ಗದಿದ್ದರೆ ಚೌಕಾಶಿ ಮಾಡಿ ಒಪ್ಪಿಸಬೇಕು’ ಎಂದು ವರಿಷ್ಠರಿಗೆ ಸಲಹೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.